ಹುಣಸೂರು: ನಿಫಾ ವೈರಸ್ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯ ಕ್ರಮ ಅನುಸರಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವತಾಲಕ್ಷ್ಮಿ ಹೇಳಿದರು.
ತಾಲ್ಲೂಕಿನ ನೇರಳಕುಪ್ಪೆ ಪಂಚಾಯಿತಿ ವ್ಯಾಪ್ತಿಯ ವಿಜಯಪುರ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ವಿಜಯಪುರ ಕಾಲೊನಿ ನಿವಾಸಿಗಳು ಕೇರಳ ರಾಜ್ಯದೊಂದಿಗೆ ವ್ಯಾಪಾರ ವಹಿವಾಟು ಹೊಂದಿದ್ದು, ಸ್ಥಳಿಯರು ಕೇರಳ ರಾಜ್ಯಕ್ಕೆ ಹೋಗಿ ಬಂದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ಸಹಾಯಕ ಶಿವನಂಜು ಮಾತನಾಡಿ, ಮುಂಗಾರು ಮಳೆ ರಾಜ್ಯಕ್ಕೆ ಪ್ರವೇಶಿಸುತ್ತಿದ್ದು, ಮನೆ ಸುತ್ತಲೂ ಸೊಳ್ಳೆ ಬಾರದಂತೆ ಹಾಗೂ ಮಳೆ ನೀರು ಸಂಗ್ರಹವಾಗದಂತೆ ಮುನ್ನಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕಡೆಮನುಗನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುಂದರಬಾಯಿ, ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.