ಶಿವಮೊಗ್ಗ: ಸಾಮಗಾನ ಸಂಸ್ಥೆ ಶುಭ ಮಂಗಳ ಸಮುದಾಯ ಭವನದಲ್ಲಿ ಜ.12 ರಂದು ಬೆಳಿಗ್ಗೆ 10.30ಕ್ಕೆ ಸ್ವಾಮಿ ವಿವೇಕಾನಂದ ಅವರ 156ನೇ ಜಯಂತಿ, ರಕ್ತದಾನ ಶಿಬಿರ ಆಯೋಜಿಸಿದೆ.
ಸೇವಾ ಸಂಕಲ್ಪದ ಹೆಸರಿನಲ್ಲಿ ಈ ಶಿಬಿರ ಆಯೋಜಿಸಲಾಗಿದೆ. ಶ್ರೀಗಂಧ, ರೋಟರಿ ಕ್ಲಬ್, ಕೇಸರಿ ಪಡೆ, ಕೋಟೆ ಯುವಕರ ಸಂಘ, ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ, ಜೆಸಿಐ, ವೈದ್ಯಕೀಯ ಪ್ರತಿನಿಧಿಗಳ ಸಂಘ ಸಹಕಾರ ನೀಡಿವೆ ಎಂದು ಸಂಸ್ಥೆಯ ಅಧ್ಯಕ್ಷ ಸುರೇಶ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇಯರ್ ಲತಾ ಗಣೇಶ್ ರಕ್ತದಾನ ಶಿಬಿರ ಉದ್ಘಾಟಿಸುವರು. ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ. ಕಾಂತೇಶ್ ಅಧ್ಯಕ್ಷತೆ ವಹಿಸುವರು. ಉಪ ಮೇಯರ್ ಎಸ್.ಎನ್. ಚನ್ನಬಸಪ್ಪ ಉಪಸ್ಥಿತರಿರುವರು.
ದೇಶಸೇವೆ ವಿಷಯ ಕುರಿತು ವಾಗ್ಮಿ ತೇಜಸ್ವಿ ಸೂರ್ಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಾಮಗಾನದ ಸದಸ್ಯ ಅಜೇಯಸಿಂಹ, ವಿವೇಕ್ ನಾಯಕ್, ಸುನಿಲ್, ಸುಹಾಸ್, ಸುಧೀಂದ್ರ ಉಪಸ್ಥಿತರಿದ್ದರು.