ಶಿವಮೊಗ್ಗ: ಮಹಾಶಿವರಾತ್ರಿ ಪ್ರಯುಕ್ತ ಅಬ್ಬಲಗೆರೆಯ ಈಶ್ವರ ವನದಲ್ಲಿ ಮಾರ್ಚ್ 4ರಂದು ಇಡೀ ರಾತ್ರಿ ಶಿವನಿಗೆ ರುದ್ರಾಭಿಷೇಕ, ಸತ್ಸಂಗ ಹಾಗೂ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಿವನ ಪೂಜೆಯೊಂದಿಗೆ ಪ್ರಕೃತಿ ಆರಾಧನೆಗೆ ಆದ್ಯತೆ ನೀಡಲಾಗುವುದು. ಪ್ರಕೃತಿ ವಿಕೋಪಗಳಿಗೆ ಅರಣ್ಯನಾಶ ಕಾರಣ. ಪ್ರಕೃತಿಯ ಉಳಿವಿನ ಪ್ರಥಮ ಪ್ರಯತ್ನವಾಗಿ ನಗರದಲ್ಲಿ ಈಶ್ವರ ವನ ಸ್ಥಾಪಿಸಲಾಗಿದೆ ಎಂದು ವನದ ಸಂಸ್ಥಾಪಕ ನವ್ಯಶ್ರೀ ನಾಗೇಶ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದುರ್ಗಿಗುಡಿ ಅಮೃತಾಮಹಿ ಯೋಗ ಕೇಂದ್ರದಿಂದ ಈಶ್ವರ ವನದವರೆಗೆ ಯೋಗಕೇಂದ್ರದ ಸದಸ್ಯರು ಕಾಲ್ನಡಿಗೆ ಜಾಥಾ ನಡೆಸುವರು. ರಾತ್ರಿ ಶಿವನ ಆರಾಧನೆಗೆ ಭಜನೆ ಮಾಡುವರು. ನಗರದ ವಿವಿಧ ಭಜನಾ ತಂಡಗಳು ಜಾಗರಣೆ ಕಾರ್ಯಕ್ರಮ ನಡೆಸಿಕೊಡುವರು ಎಂದರು.
ಈಶ್ವರ ಪ್ರಕೃತಿ ಪ್ರಿಯ, ವೈರಾಗಿ. ದೇವರ ಹೆಸರಲ್ಲಿ ಕಾಡು ಉಳಿಸುವ ಮೂಲಕ ಪ್ರಕೃತಿ ರಕ್ಷಿಸಬೇಕಿದೆ. ಅರಣ್ಯನಾಶದಿಂದ ಜನರಿಗೆ ಒಳ್ಳೆಯ ಗಾಳಿ ಸಿಗುತ್ತಿಲ್ಲ. ತಮ್ಮದೇ ಸ್ವಂತ 1 ಎಕರೆ ಜಾಗದಲ್ಲಿ 30 ಜಾತಿಯ 350 ವೃಕ್ಷಗಳನ್ನು ನೆಟ್ಟು ಪೋಷಿಸಲಾಗುತ್ತಿದೆ ಎಂದರು.
ಅಂದು ಜಾಗರಣೆ ಪ್ರಯುಕ್ತ ಪ್ರಕೃತಿ ಪ್ರಿಯ ಶಿವನಿಗೆ ಜಲಾಭಿಷೇಕ ಮಾಡುವ ಮೂಲಕ ಶಿವನನ್ನು ಆರಾಧಿಸಲಾಗುವುದು. ಸಾರ್ವಜನಿಕರಿಗೂ ಮುಕ್ತ ಅವಕಾಶವಿದೆ ಎಂದು ವಿವರ ನೀಡಿದರು.
ಮಹಾದೇವ್ ಮಾತನಾಡಿ, ಸದ್ಯದಲ್ಲೇ ಇನ್ನೂ ಮೂರು ಎಕರೆ ಜಾಗದಲ್ಲಿ ಮತ್ತೊಂದು ವನ ನಿರ್ಮಾಣ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಜನಾರ್ದನ ಪೈ ಇದ್ದರು.