ಶಿವಮೊಗ್ಗ: ಶ್ರೀಮಾತಾ ಮಾಂಗಲ್ಯ ಮಂದಿರದಲ್ಲಿ ಮಾರ್ಚ್ 24ರಂದು ವಿಪ್ರ ಸಾಂಸ್ಕೃತಿಕ ವೇದಿಕೆ ಲೋಕಾರ್ಪಣೆ ಹಾಗೂ ಜಿಲ್ಲಾ ವಿಪ್ರ ಕಲಾವಿದರ ಸಮ್ಮೇಳನ ಆಯೋಜಿಸಲಾಗಿದೆ.
ವಿಪ್ರ ಸಮಾಜದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಲಾವಿದರು ಹಾಗೂ ಸಂಘಟಕರನ್ನು ಒಂದೇ ವೇದಿಕೆಯಲ್ಲಿ ತರಲಾಗುವುದು. ಅವರ ಪ್ರತಿಭೆ ಹಾಗೂ ಕೌಶಲ ಅನಾವರಣ ಮಾಡುವುದು ವೇದಿಕೆಯ ಉದ್ದೇಶ ಎಂದು ವೇದಿಕೆಯ ಸಂಚಾಲಕ ಹೆಚ್. ಎಸ್.ನಾಗರಾಜ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
24ರ ಬೆಳಿಗ್ಗೆ 10.30ಕ್ಕೆ ವಿಪ್ರ ಸಮಾಜದ ಪ್ರಮುಖ ಗಮಕಿಗಳಾದ ಹೊಸಳ್ಳಿ ಆರ್.ಕೇಶವಮೂರ್ತಿ ವೇದಿಕೆ ಉದ್ಘಾಟಿಸಲಿದ್ದಾರೆ. ಚುಟುಕು ಕವಿ ಎಚ್.ಡುಂಡಿರಾಜ್, ರಂಗಕರ್ಮಿ ಹಾಗೂ ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಉಪಸ್ಥಿತರಿರುವರು.
ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಅಧ್ಯಕ್ಷತೆ ವಹಿಸುವರು. ಬೆಳಗ್ಗಿನಿಂದ ಸಂಜೆವರೆಗೂ ವಿವಿಧ ಗೋಷ್ಠಿ, ಸಂವಾದಗಳು, ಚರ್ಚೆ ಹಾಗೂ ವಿಚಾರ ಸಂಕಿರಣಗಳು ನಡೆಯಲಿದೆ. ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಪ್ರೊ.ಕೂಡ್ಲಿ ಜಗನ್ನಾಥ ಶಾಸ್ತ್ರಿ ಅವರ ‘ಪರದೇವ ಕವಿಯ ತುರಂಗ ಭಾರತದ ಕಥಾ ತರಂಗ’ ಪುಸ್ತಕ ಬಿಡುಗಡೆಯಾಗಲಿದೆ ಎಂದು ಕೆ.ಸಿ.ನಟರಾಜ್ ಭಾಗವತ್ ವಿವರ ನೀಡಿದರು.