ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಮೇ 26ರಂದು ಸಂಜೆ 7ಕ್ಕೆ ‘ಮೃಗತೃಷ್ಣ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ವಸುಮತಿ ಉಡುಪ ರಚನೆಯ ಈ ನಾಟಕವನ್ನು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿದ್ದಾರೆ. ಹೊಂಗಿರಣ ನಾಟಕ ತಂಡದ ಸದಸ್ಯರು ಅಭಿನಯಿಸಿದ್ದಾರೆ ಎಂದು ಹೊಂಗಿರಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಹಿರೇಗೋಣಿಗೆರೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಇದೊಂದು ಅದ್ಭುತ ನಾಟಕ. ಮನುಷ್ಯನಿಗೆ ಬಂದ ಮುಪ್ಪು ಸ್ವೀಕರಿಸದೆ, ಭಯಪಟ್ಟು ಕೊನೆಗೆ ಸಾವಿಗಾಗಿಯೇ ತವಕಿಸುವ ತಲ್ಲಣ ಈ ನಾಟಕದ ಕೇಂದ್ರ ಬಿಂದು. ಪ್ರೀತಿ ಕಾಲಾತೀತ, ಸೀಮಾತೀತ, ನಿತ್ಯನೂತನ ಎಂದುಕೊಂಡರೂ, ಸ್ವಾರ್ಥಕ್ಕಾಗಿ ತುಡಿಯುವುದು ಈ ನಾಟಕದ ಪ್ರಮುಖ ಸಂಘರ್ಷ ಎಂದು ವಿಶ್ಲೇಷಿಸಿದರು.
ಇದೊಂದು ಸಂಘರ್ಷದ ಮುಖಾಮುಖಿ. ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು, ಯೌವನ, ಮುಪ್ಪು ಸಹಜವಾಗಿದ್ದರೂ, ಚಿರಂಜೀವಿಯಾಗಿರಬಹುದೇ ಎಂಬ ಉತ್ತರಕ್ಕೆ ಈ ನಾಟಕ ಉತ್ತರ ನೀಡುತ್ತದೆ. ₨ 5 ಶುಲ್ಕ ನಿಗದಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಹರೀಶ್, ಸುಂದರೇಶ್, ಸುಶ್ಮಿತಾ ಉಪಸ್ಥಿತರಿದ್ದರು.