ಶಿವಮೊಗ್ಗ: ಕರ್ನಾಟಕ ಸಂಘದ ಸಭಾಂಗಣದಲ್ಲಿ ಜೂನ್ 23ರಂದು ಸಂಜೆ 5ಕ್ಕೆ ಜನಪದ ನೃತ್ಯ ರೂಪಕ ಸ್ಪರ್ಧೆ ಆಯೋಜಿಸಲಾಗಿದೆ.
ಕರ್ನಾಟಕ ಸಂಘ, ಸಹ್ಯಾದ್ರಿ ಲಲಿತಾ ಅಕಾಡೆಮಿ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆಯೂ ಇರುತ್ತದೆ ಎಂದು ಲಲಿತಾ ಅಕಾಡೆಮಿ ಅಧ್ಯಕ್ಷ ಎಂ.ಎನ್.ಸುಂದರರಾಜ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬಳ್ಳೇಕೆರೆ ಹನುಂತಪ್ಪ ಅವರ ಸ್ಮರಣಾರ್ಥ ಈ ಸ್ಪರ್ಧೆ ನಡೆಯಲಿದೆ. 10ಕ್ಕೂ ಹೆಚ್ಚು ಸಂಸ್ಥೆಗಳವರು ಭಾಗವಹಿಸಲಿವೆ. ವಿಜೇತರಾದವರಿಗೆ 5ಸಾವಿರದಿಂದ 2 ಸಾವಿರದವರೆಗೆ ಬಹುಮಾನ ನೀಡಲಾಗುವುದು. ಜಾನಪದ ಕಲಾವಿದ ಗುಡ್ಡಪ್ಪಜೋಗಿ ಕಾರ್ಯಕ್ರಮ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಎಚ್.ಡಿ. ಉದಯಶಂಕರ ಶಾಸ್ತ್ರಿ, ಅಕಾಡೆಮಿ ಗೌರವಾಧ್ಯಕ್ಷ ಡಾ.ಮಲ್ಲೇಶ್ ಹುಲ್ಲಮನಿ ಭಾಗವಹಿಸುವರು. ಛಾಯಾಚಿತ್ರಗಾರ ಎಂ.ಮಹೇಶ್ ಅವರನ್ನು ಸನ್ಮಾನಿಸಲಾಗುವುದು ಎಂದರು.