ಶಿವಮೊಗ್ಗ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ ಹೇಳಿಕೆಗೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಬಲಿಷ್ಠ ಪಕ್ಷದ ಅಧ್ಯಕ್ಷರ ಕುರಿತು ಕ್ಷುಲ್ಲಕ ಹೇಳಿಕೆ ನೀಡುವುದು ಮಾಜಿ ಮುಖ್ಯಮಂತ್ರಿಗೆ ಘನತೆ ತರುವುದಿಲ್ಲ. ಮೂರು ಬಾರಿ ಸಂಸದರಾಗಿರುವ ಕಟೀಲ್ ಪಕ್ಷ ನಡೆಸಲು ಸಮರ್ಥ ವ್ಯಕ್ತಿ. ಸಿದ್ಧರಾಮಯ್ಯ ಅವರ ದುರಾಡಳಿತಕ್ಕೆ ಜನರು ತಕ್ಕ ತೀರ್ಪು ನೀಡಿದ್ದರೂ ಅವರು ಬುದ್ಧಿ ಕಲಿತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧವೂ ಹಗುರ ಮಾತುಗಳನ್ನು ಆಡುತ್ತಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
3.50 ಲಕ್ಷ ತಲುಪಲಿದೆ ಸದಸ್ಯತ್ವ:
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮತ್ತಷ್ಟು ಒತ್ತು ನೀಡಲಾಗುವುದು. ಜಿಲ್ಲೆಯಲ್ಲಿ ಈಗಾಗಲೇ 1.50 ಸದಸ್ಯರು ಇದ್ದಾರೆ. ಆ ಸಂಖ್ಯೆ ಶೀಘ್ರ 3.50 ಲಕ್ಷಕ್ಕೆ ತಲುಪಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ನೆರೆ ಪರಿಹಾರ, ಆತಂಕ ಬೇಡ:
ನೆರೆ ಪರಿಹಾರ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿಲ್ಲ. ಅಧಿಕಾರಿಗಳು ನಷ್ಟದ ಅಂದಾಜು ನೀಡಿದ ನಂತರ ಅನುದಾನ ನೀಡುತ್ತದೆ. ರಾಜ್ಯ ಸರ್ಕಾರವೂಸ್ಪಂದಿಸುತ್ತಿದೆ ಎಂದರು.
ಆರ್ಥಿಕ ಕುಸಿತ ಜಾಗತಿಕ ಘಟನೆ. ಕೇಂದ್ರ ಸರ್ಕಾರ ಈಗಾಗಲೇ ಉತ್ತೇಜನಕಾರಿ ಕ್ರಮಗಳನ್ನು ಪ್ರಕಟಿಸಿದೆ. ಅಕ್ಟೋಬರ್ ವೇಳೆಗೆ ಮತ್ತೆ ಹಳಿಗೆ ಬರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಪಕ್ಷದ ಮುಖಂಡರಾದ ಡಿ.ಎಸ್.ಅರುಣ್, ಬಿಳಕಿ ಕೃಷ್ಣಮೂರ್ತಿ ಅನಿತಾ ರವಿಶಂಕರ್, ಬಿ.ಆರ್.ಮಧುಸೂದನ್, ಹಿರಣ್ಣಯ್ಯ, ರತ್ನಾಕರ ಶೆಣೈ ಇದ್ದರು.