ವಿಜಯಪುರ: ‘ದೇಶದ ಪ್ರತಿಯೊಬ್ಬ ಪ್ರಜೆಯೂ ರಾಷ್ಟ್ರ ಧ್ವಜದ ಗೌರವವನ್ನು ಕಾಪಾಡಬೇಕು’ ಎಂದು ಎಎಸ್ಪಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಹಾಗೂ ಭಾರತ ಸೇವಾ ದಳದ ಜಿಲ್ಲಾ ಸಮಿತಿ ಪದಾಧಿಕಾರಿ ಡಾ.ಎಚ್.ಎಂ.ಮುಜಾವರ ಹೇಳಿದರು.
ನಗರದ ಎಎಸ್ಪಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾರತ ಸೇವಾ ದಳದ ಜಿಲ್ಲಾ ಸಮಿತಿ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರ ಧ್ವಜ ಅಂಗೀಕಾರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ನಮ್ಮ ದೇಶದ ರಾಷ್ಟ್ರ ಧ್ವಜವನ್ನು ವಿನ್ಯಾಸಗೊಳಿಸಿದವರು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ. ರಾಷ್ಟ್ರೀಯ ಹಬ್ಬಗಳಂದು ಮಾತ್ರ ರಾಷ್ಟ್ರ ಧ್ವಜವನ್ನು ಹಾರಿಸಲು ಭಾರತೀಯರಿಗೆ ಅನುಮತಿ ಇತ್ತು. ಆದರೆ, 2002 ರ ಜನವರಿ 15ರಿಂದ ನಾಗರಿಕರು ಪ್ರತಿ ದಿನ ರಾಷ್ಟ್ರ ಧ್ವಜವನ್ನು ಹಾರಿಸಲು ಅನುಮತಿ ನೀಡಲಾಯಿತು’ ಎಂದು ತಿಳಿಸಿದರು.
ಭಾರತ ಸೇವಾ ದಳದ ಜಿಲ್ಲಾ ಸಂಘಟಕ ನಾಗೇಶ ಡಿ.ಡೋಣೂರ ರಾಷ್ಟ್ರ ಧ್ವಜ ಬೆಳೆದು ಬಂದ ದಾರಿ, ರಾಷ್ಟ್ರ ಧ್ವಜದ ನಿಯಮಗಳು, ಧ್ವಜಕ್ಕೆ ಕೊಡುವ ಗೌರವ ಕುರಿತು ಮಾಹಿತಿ ನೀಡಿದರು.
ಪ್ರೊ.ವಿ.ಎಸ್.ಬಗಲಿ, ಸೇವಾದಳದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ.ಬಿರಾದಾರ (ಕಡ್ಲೇವಾಡ) ಮಾತನಾಡಿದರು. ಪ್ರೊ.ಡಿ.ಬಿ.ಕೋಟಿ, ನಿವೃತ್ತ ಪ್ರಾಧ್ಯಾಪಕ ಡಿ.ಬಿ.ಹಿರೇಕುರಬರ ಇದ್ದರು. ಪ್ರೊ.ಎಸ್.ಬಿ.ದೇಸಾಯಿ ಸ್ವಾಗತಿಸಿ, ಪ್ರೊ.ಎಸ್.ಎಸ್.ಕನ್ನೂರ ನಿರೂಪಿಸಿದರು. ಪ್ರೊ.ಡಿ.ಬಿ.ಕೋಟಿ ವಂದಿಸಿದರು.