ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾನದಿ ಪ್ರವಾಹದಿಂದ ಲಿಂಗಸುಗೂರು ಹಾಗೂ ದೇವದುರ್ಗ ತಾಲ್ಲೂಕುಗಳ 13 ಸರ್ಕಾರಿ ಶಾಲೆಗಳ 25 ಕೋಣೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ. ನಂದನೂರ ಅವರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ.
ಒಂಭತ್ತು ಕೋಣೆಗಳು ಪೂರ್ಣಪ್ರಮಾಣದಲ್ಲಿ ಹಾನಿಯಾಗಿವೆ. ಐದು ಕೋಣೆಗಳು ಭಾಗಶಃ ಹಾನಿಯಾಗಿವೆ ಹಾಗೂ 11 ಕೋಣೆಗಳು ಅಲ್ಪಸ್ವಲ್ಪ ಹಾನಿಯಾಗಿವೆ.
ಲಿಂಗಸುಗೂರು ತಾಲ್ಲೂಕಿನ ಕಡದರಗಡ್ಡಿ, ಯರಗೋಡಿ, ಯಳಗುಂದಿ, ಗುಂತಗೋಳ, ಗೋನವಾಟ್ಲಾ, ಹಂಚಿನಾಳ, ಜಲದುರ್ಗ, ರಾಯದುರ್ಗದ ಶಾಲಾ ಕೋಣೆಗಳಿಗೆ ಹಾನಿಯಾಗಿದೆ. ದೇವದುರ್ಗ ತಾಲ್ಲೂಕಿನ ಅಂಜಳ, ಹೇರುಂಡಿ, ಯಾಟಗಲ್, ಲಿಂಗದಳ್ಳಿ ಹಾಗೂ ಹಿರೇರಾಯನಕುಂಪಿಯ ಸರ್ಕಾರಿ ಶಾಲಾ ಕೋಣೆಗಳಿಗೆ ಹಾನಿಯಾಗಿದೆ.