ರಾಯಚೂರು: ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ಕೇಂದ್ರವೊಂದನ್ನು ರಾಯಚೂರಿನಲ್ಲಿ ಆರಂಭಿಸುವಂತೆ ಒತ್ತಾಯಿಸಿ ಏಮ್ಸ್ ಹೋರಾಟ ಸಮಿತಿಯು ಆರಂಭಿಸಿರುವ ನಿರಂತರ ಧರಣಿ ಬುಧವಾರ 13ನೇ ದಿನಕ್ಕೆ ಕಾಲಿರಿಸಿದೆ. ಧರಣಿಯನ್ನು ಜಿಲ್ಲಾ ಆಮ್ ಆದ್ಮಿ ಪಾರ್ಟಿ (ಎಎಪಿ) ಬೆಂಬಲಿಸಿ ಮುಖಂಡರೆಲ್ಲರೂ ಧರಣಿಯಲ್ಲಿ ಭಾಗವಹಿಸಿದ್ದರು.
ಏಮ್ಸ್ ರಾಯಚೂರಿನಲ್ಲಿ ಆರಂಭವಾಗದಿರುವುದಕ್ಕೆ ಮುಖ್ಯವಾಗಿ ಈ ಭಾಗದ ರಾಜಕೀಯ ನಾಯಕರೇ ಕಾರಣ. ಶಾಸಕರು ಮತ್ತು ಸಂಸದರು ಸೂಕ್ತವಾಗಿ ಈ ಭಾಗದ ಬೇಡಿಕೆಗಳನ್ನು ಮುಖ್ಯಮಂತ್ರಿ ಮತ್ತು ಪ್ರಧಾನಿಗೆ ತಲುಪಿಸುತ್ತಿಲ್ಲ ಎಂದರು.
ಬರೀ ಭರವಸೆ ನೀಡುವ ಕೆಲಸ ಮಾಡಲಾಗುತ್ತಿಲ್ಲ. ಐಐಟಿ ಕೈತಪ್ಪಿಸಿದ ಸರ್ಕಾರ, ಈಗ ಏಮ್ಸ್ ಕೂಡಾ ಬೇರೆ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಕೂಡಲೇ ಸ್ಪಂದಿಸಿ ರಾಯಚೂರು ಏಮ್ಸ್ ಹೋರಾಟ ಸಮಿತಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿರುವ ಧರಣಿ ಸ್ಥಳದಲ್ಲೇ ಮನವಿ ಸಲ್ಲಿಸಲಾಯಿತು.
ಎಎಪಿ ಪದಾಧಿಕಾರಿಗಳಾದ ಕೆ ಬಸವರಾಜ ಗುತ್ತೇದಾರ್, ಸತ್ಯನಾಥ್, ಮಕ್ಬೂಲ್ ಪಾಷಾ, ಆರ್ ವೀರೇಶ್, ಅಜರ್, ಕೆ ಭೀಮರಾಯ ದೇವದುರ್ಗ, ಖಾದರ್ ಬಾಷಾ, ವಾಹಿದ್ ಅಸ್ಮಾಕ, ಕೃಷ್ಣ ,ಶ್ರೀನಿವಾಸ್, ಸದ್ದಾಮ್, ಕೆ ಶಿವಯ್ಯಶೆಟ್ಟಿ, ಅಜರುದ್ದೀನ್, ತಿರುಮಲ ಮತ್ತಿತರರು ಇದ್ದರು.