ರಾಯಚೂರು: ರಾಷ್ಟ್ರಕವಿ ಕುವೆಂಪುರವರ ಆದರ್ಶಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಅನಿಲ್ ಕುಮಾರ ಆರೋಲಿಕರ್ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ವಿಶ್ವಮಾನವ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವೈಚಾರಿಕ ನೆಲೆಗಟ್ಟಿನ ಸಾಹಿತ್ಯದ ಮೂಲಕ ವಿಶ್ವ ಮಾನವ ಕುಲಕ್ಕೆ ಆದರ್ಶರಾಗಿದ್ದಾರೆ. ಅವರ ತತ್ವ, ಸಿದ್ಧಾಂತಗಳು ಇಂದಿನ ದಿನಮಾನಗಳಲ್ಲಿ ಬಹಳ ಪ್ರಸ್ತುತವಾಗಿವೆ ಎಂದರು.
ಸಾಹಿತಿ ಲಿಂಗಣ್ಣ ಗಾಣಧಾಳ ಮಾತನಾಡಿ, ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸಾಹಿತ್ಯದ ಆಸಕ್ತಿ ಹೊಂದಿದ್ದ ಕುವೆಂಪು ವಿಶ್ವಶ್ರೇಷ್ಠ ಕವಿಯಾಗಿದ್ದಾರೆ. ಈ ಹಂತಕ್ಕೆ ಬೆಳೆಯುತ್ತೇನೆ ಎಂದು ಅವರೂ ಅಂದುಕೊಂಡರಿಲಿಕ್ಕಿಲ್ಲ ಎಂದು ಹೇಳಿದರು.
ಎಲ್ಲ ಊರುಗಳಲ್ಲಿ ಗಾಂಧೀಜಿ ಪ್ರತಿಮೆ ನಿಲ್ಲಿಸಿದಂತೆ ಅವರ ಆದರ್ಶಗಳನ್ನು ಅನುಸರಿಸುವುದು ನಿಲ್ಲಿಸುತ್ತೇವೆ. ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗಳು ಸಾರ್ಥಕವಾಗಲಿವೆ ಎಂದು ತಿಳಿದರು.
ಇದೇ ಸಂದರ್ಭದಲ್ಲಿ ವಿಶ್ವಮಾನವ ಕುವೆಂಪು ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ವಿಶ್ವ ಮಾನವ ಕುವೆಂಪು ಎಂಬ ಕಿರು ಹೊತ್ತಿಗೆಯನ್ನು ಬಿಡುಗೆಡೆ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ.ನೀಲಮ್ಮ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಜೆ.ಎಲ್.ಈರಣ್ಣ, ಸಂಗೀತ ಶಿಕ್ಷಕರಾದ ರಾಘವೇಂದ್ರ ಆಶಾಪೂರ ಇದ್ದರು.