ರಾಯಚೂರು: ಜಿಲ್ಲೆಯ ನೆಲ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾಗಿ ಅತ್ಯಂತ ಫಲವತ್ತಾಗಿದೆ. ಕೋಮು ಸೌಹಾರ್ದತೆ ಮತ್ತು ಬಹುತ್ವಕ್ಕೆ ಸದಾ ಮಿಡಿಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ. ಮನು ಬಳಿಗಾರ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಲೋಹಿಯಾ ಪ್ರತಿಷ್ಠಾನ, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು ಅವರ ‘ಇಮಾಂಬಿ ಮತ್ತು ಇತರ ಕತೆಗಳು’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲೆಯ ಪರಿಸರದಲ್ಲಿ ಅರಳಿದ ಅಪರೂಪದ ಸೃಜನಶೀಲ ಪ್ರತಿಭೆ ಡಾ. ಬಸವಪ್ರಭು ಪಾಟೀಲ. ಅವರು ವೃತ್ತಿ ಹಾಗೂ ಪ್ರವೃತ್ತಿ ಎರಡರಲ್ಲೂ ನೈಪುಣ್ಯತೆ ಸಾಧಿಸಿದ್ದಾರೆ ಎಂದು ಹೇಳಿದರು.
ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದರಿಯ ಸಮ್ಮೇಳನವನ್ನಾಗಿಸಲು ಶ್ರಮಿಸಿದ್ದರು ಎಂದರು.
ಸಾಹಿತಿ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ಬೆಟ್ಟದೂರು ಅವರ ಬಹುಪಾಲು ಕತೆಗಳಲ್ಲಿ ಗ್ರಾಮೀಣ ಜಗತ್ತು ತೆರೆದುಕೊಂಡಿದೆ. ಇಲ್ಲಿನ ಕತೆಗಳ ಸ್ಥಾಯೀಭಾವ ಪ್ರೇಮ ಮತ್ತು ಸೌಹಾರ್ದತೆಯಾಗಿದೆ. ಕತೆಗಾರರು ಪ್ರಧಾನವಾಗಿ ಮಾನವೀಯ ಮೌಲ್ಯಗಳಿಗೆ, ಜೀವಪರ ಚಿಂತನೆಗೆ ಒತ್ತು ಕೊಟ್ಟಿದ್ದಾರೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಕೆ.ಗಿರಿಜಾ ರಾಜಶೇಖರ ಅವರುಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ನಾಡು ಲೇಖಕರ ಸಂಘದ ಅಧ್ಯಕ್ಷ ಅಪ್ಪರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿ ಅಯ್ಯಪ್ಪಯ್ಯ ಹುಡಾ, ಚಿದಾನಂದ ಸಾಲಿ, ಕಲಾವಿದ ನರ ಸಿಂಹಲು ವಡವಾಟಿ, ಡಾ.ಬಸವಪ್ರಭು ಪಾಟೀಲ ಬೆಟ್ಟದೂರು, ಡಾ. ಅರುಣಾ ಹಿರೇಮಠ, ಭೀಮನಗೌಡ ಇಟಗಿ, ರಾಮಣ್ಣ ಹವಳೆ, ಮಲ್ಲಯ್ಯ ನಾಗೋಲಿ, ವೀರಹನುಮಾನ, ಮಂಡಲಗಿರಿ ಪ್ರಸನ್ನ, ಪಲಗುಲ ನಾಗರಾಜ, ನಾಗರತ್ನಮ್ಮ ಬೆಟ್ಟದೂರು ಇದ್ದರು.
ಭೀಮೋಜಿರಾವ್ ಜಗತಾಪ್ ಸ್ವಾಗತಿಸಿದರು. ವೈಶಾಲಿ ಪಾಟೀಲ ನಿರ್ವಹಿಸಿದರು. ಶಿವರಾಜ ಅಕ್ಕಿಕಲ್ ಅವರ ವಂದಿಸಿದರು.