ಕೋವಿಡ್ ಪರಿಹಾರ ನೀಡಲು ಒತ್ತಾಯ

ರಾಯಚೂರು: ಕೋವಿಡ್-19 ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೊಳಗಾದ ಪ್ರತಿ ಕುಟುಂಬಕ್ಕೆ 6 ತಿಂಗಳು ಮಾಸಿಕ ತಲಾ ₹ 7,500 ಪರಿಹಾರ ನೀಡಬೇಕು. ಉಚಿತವಾಗಿ ಕೋವಿಡ್ ಪರೀಕ್ಷೆ ನಡೆಸಿ ಔಷಧಿ ನೀಡಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್ಸ್(ಸಿಐಟಿಯು) ಕರ್ನಾಟಕ ಪ್ರಾಂತ ರೈತ ಸಂಘ( ಕೆಪಿಆರ್ ಎಸ್) ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿ, ದೇಶದಲ್ಲಿ ಒಂದೆಡೆ ಆರ್ಥಿಕ ಬಿಕ್ಕಟ್ಟು ಮತ್ತೊಂದೆಡೆ ಕೋವಿಡ್ ಸಂಕಷ್ಟದಿಂದ ಜನರು ನಲುಗಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಆರ್ಥಿಕ ಸಂಕಷ್ಟ ಪರಿಹರಿಸಿ ಆರೋಗ್ಯ ರಕ್ಷಣೆ ನೀಡದೇ ಕಾರ್ಪೋರೆಟ್ ಕಂಪನಿಗಳ ಲೂಟಿಗೆ ಆದ್ಯತೆ ನೀಡಿ ಜನವಿರೋಧಿ ನೀತಿಗಳನ್ನು ಜಾರಿಗೆ ತಂದು ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕೂಡಲೇ ಸರ್ಕಾರ ಪ್ರತಿ ಕುಟುಂಬದ ಸದಸ್ಯರಿಗೆ ತಲಾ 10 ಕೆ.ಜಿ ಆಹಾರ ಧಾನ್ಯ ವಿತರಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದುಡಿಯುವರಿಗೆ ಮಾಸಿಕ ₹600 ವೇತನ ಹೆಚ್ಚಿಸಬೇಕು ಹಾಗೂ ನಗರ ಪ್ರದೇಶಕ್ಕೂ ವಿಸ್ತರಿಸಿ 200 ದಿನಗಳ ಕೆಲಸ ನೀಡಬೇಕು. ಶಿಕ್ಷಣ, ರೈಲ್ವೆ, ವಿಮಾ, ಬ್ಯಾಂಕು, ಆರೋಗ್ಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ನಿರ್ಧಾರ ಕೈಬಿಡಬೇಕು ಹಾಗೂ ಅಗತ್ಯ ಸೇವಾ ಸುಗ್ರಿವಾಜ್ಞೆಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ವರಲಕ್ಷ್ಮೀ, ಸಂಚಾಲಕ ಡಿ.ಎಸ್. ಶರಣಬಸವ, ಕೆ.ಜಿ.ವೀರೇಶ, ಕರಿಯಪ್ಪ ಅಚೊಳ್ಳಿ, ರಂಗನಗೌಡ, ಸತ್ಯಪ್ಪ ಬಾಪೂರ, ಹೆಚ್.ಪದ್ಮಾ, ಪಾರ್ವತಿ, ಮಲ್ಲಿಕಾರ್ಜುನ, ಚನ್ನಬಸವ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.