ಮಸ್ಕಿ: ‘ಅಕಾಲಿಕ ಮಳೆಯಿಂದಾಗಿ ಕ್ಷೇತ್ರದ ಬಹುತೇಕ ಕಡೆ ಭತ್ತ ಹಾಗೂ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು ಸರ್ಕಾರ ಕೂಡಲೇ ರೈತರಿಗೆ ಬೆಳೆ ಹಾನಿ ಪರಿಹಾರ ನೀಡಬೇಕು‘ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಒತ್ತಾಯಿಸಿದರು.
ಶನಿವಾರ ಕ್ಷೇತ್ರದ ಪಾಂಡುರಂಗ ಕ್ಯಾಂಪ್ ಸೇರಿದಂತೆ ಮಳೆಯಿಂದಾಗಿ ಬೆಳೆ ಹಾನಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಮಳೆಯಿಂದಾಗಿ ಬಹುತೇಕ ಭತ್ತ ನೆಲ ಕಚ್ಚಿದೆ. ಎಕರೆ ₹ 25 ಸಾವಿರದಿಂದ ₹ 30 ಸಾವಿರ ರೈತರು ಖರ್ಚು ಮಾಡಿದ್ದಾರೆ. ತೊಗರಿ ಬೆಳೆ ಕೂಡಾ ಮಳೆಗೆ ಹಾಳಾಗಿದೆ. ತೊಗರಿ ಕಾಳು ಹಿಡಿಯುವ ಹಂತಕ್ಕೆ ಬಂದಿದ್ದು ಗಿಡದಲ್ಲಿ ಮೊಳಕೆ ಹೊಡೆಯತೊಡಗಿವೆ‘ ಎಂದರು.
ಕಟಾವಿಗೆ ಬಂದ ಭತ್ತ ಹಾಗೂ ತೊಗರಿ ಬೆಳೆ ಹಾಳಾಗಿದ್ದರಿಂದ ಸರ್ಕಾರ ರೈತರು ಖರ್ಚು ಮಾಡಿದ ಎಕರೆಗೆ ₹ 25 ಸಾವಿರದಿಂದ ₹ 30 ಸಾವಿರ ಬೆಳೆ ಪರಿಹಾರ ನೀಡುವ ಮೂಲಕ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು.
ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಮೈಬೂಸಾಬ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹನುಮೇಶ ಬಾಗೋಡಿ, ಶೇಖರಗೌಡ ಸೇರಿದಂತೆ ಇತರರು ಇದ್ದರು.