ರಾಯಚೂರು: ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಅವಶ್ಯಕವಾಗಿದ್ದು, ಸರಿಯಾದ ಸಮಯಕ್ಕೆ ಆಹಾರ ಸೇವಿಸುವ ಮೂಲಕ ತಾಯಿ ಹಾಗೂ ಮಗು ಅಪೌಷ್ಟಿಕತೆಯಿಂದ ಮುಕ್ತರಾಗಬೇಕು ಎಂದು ಚಿತ್ರ ನಟಿ ಪ್ರೇಮಾ ಹೇಳಿದರು.
ತಾಲ್ಲೂಕಿನ ಯರಗೇರಾ ಗ್ರಾಮದ ಆರೋಗ್ಯ ಉಪಕೇಂದ್ರದಲ್ಲಿ ಲಯನ್ಸ್ ಕ್ಲಬ್ ಹಾಗೂ ಪ್ರಾಥರ್ಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಟಿಕ ಆಹಾರ ಮಾಸಾಚರಣೆ (ಪೋಷಣೆ ಅಭಿಯಾನ ಕಾರ್ಯಕ್ರಮ)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ತಾಯಿ ಹಾಗೂ ಶಿಶುಮರಣ ಪ್ರಮಾಣ ಹೆಚ್ಚಾಗಿದ್ದು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಲಯನ್ಸ್ ಕ್ಲಬ್ನ ಅಧ್ಯಕ್ಷ ಡಾ.ವೆಂಕಟೇಶ ವೈ.ನಾಯಕ ಮಾತನಾಡಿ, ಪೋಷಣ್ ಅಭಿಯಾನ ಕಾರ್ಯಕ್ರಮ ಉದ್ದೇಶದ ಹಾಗೂ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಸುನೀತಾ ಮಾತನಾಡಿ, ಇಲಾಖೆಯಲ್ಲಿ ಬರುವ ಹಲವಾರು ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ಪದಾರ್ಥ ಹಾಗೂ ಲಯನ್ಸ್ ಕ್ಲಬ್ನ ಕಾರ್ಯದರ್ಶಿ ನರೇಶ ಬಾಬು ಕರೂಟೂರಿ ಐರನ್ ಟಾನಿಕ್, ಕ್ಯಾಲ್ಸಿಯಂ ಮಾತ್ರೆಗಳ ಕಿಟ್ಗಳನ್ನು ವಿತರಣೆ ಮಾಡಲಾಯಿತು.
ರಾಯಚೂರು ಲಯನ್ಸ ಕ್ಲಬ್ ಖಜಾಂಚಿ ಹೇಮಣ್ಣ ಉಣ್ಣಿ, ಹಿರಿಯ ಸದಸ್ಯ ಬಸವರಾಜ ಗದಗಿನ, ಮಹಾದೇವಪ್ಪ, ದಿನೇಶ ದಪ್ತರಿ ಹಾಗೂ ಬೆಂಗಳೂರು ಲಯನ್ಸ್ ಕ್ಲಬ್ ಸದಸ್ಯೆ ಶೋಭಾ, ಶ್ರೀದೇವಿ, ಆರೋಗ್ಯಾಧಿಕಾರಿ ಡಾ. ಸುಧಾ ಯರಗೇರಾ, ಕಿರಿಯ ಆರೋಗ್ಯ ಸಹಾಯಕಿ ಶಾರದಾ ಗೋನಾಳ, ವಿನಯಕುಮಾರ ಹಾಗೂ ಆಶಾಕಾರ್ಯಕರ್ತೆಯರು ಇದ್ದರು.