ರಾಯಚೂರು: ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿದ್ದ ಬೀದಿವ್ಯಾಪಾರಸ್ಥರು ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನಗರಸಭೆ ಸಿಬ್ಬಂದಿ ನೇತೃತ್ವದಲ್ಲಿ ಶುಕ್ರವಾರ ತೆರವುಗೊಳಿಸುವ ಕಾರ್ಯ ನಡೆಯಿತು.
ನಗರದ ಸ್ಟೇಷನ್ ರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳನ್ನು ತೆರವುಗೊಳಿಸಿ ನಾಗರಿಕರ ಓಡಾಟಕ್ಕೆ ಅನುಕೂಲ ಮಾಡಲಾಯಿತು. ತಳ್ಳು ಬಂಡಿಗಳು ಹಾಗೂ ಅಂಗಡಿಗಳಿಂದ ಜನರು ಸಂಚರಿಸಲು ಅಡ್ಡಿಯಾಗಿದ್ದ ಪಾದಚಾರಿಗಳ ಮಾರ್ಗಗಳು ಇದೇ ಮೊದಲ ಬಾರಿಗೆ ಮುಕ್ತವಾಗಿ ಕಂಡವು.
ಪಾದಚಾರಿ ಮಾರ್ಗದಲ್ಲಿ ಇನ್ನುಮುಂದೆ ವ್ಯಾಪಾರ ಮಾಡದಂತೆ ಸೂಚನೆ ನೀಡಿದ ಅಧಿಕಾರಿಗಳು, ಮತ್ತೆ ಅತ್ರಿಕ್ರಮಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಅತಿಕ್ರಮಣ ತೆರವಿಗೆ ನಿರಾಕರಿಸಿದ ಬಂಡಿಗಳನ್ನು ನಗರಸಭೆ ಸಿಬ್ಬಂದಿಯು ಟ್ರ್ಯಾಕ್ಟರ್ನಲ್ಲಿ ಎತ್ತಿಹಾಕಿಕೊಂಡು ಹೋದರು. ಮೊದಲ ಹಂತವಾಗಿ ಜಗಜೀವನರಾಂ ವೃತ್ತದಿಂದ ರಂಗಮಂದಿರವರೆಗಿನ ಸ್ಟೇಷನ್ ರಸ್ತೆಯಲ್ಲಿಮಾತ್ರ ಕಾರ್ಯಾಚರಣೆ ನಡೆಸಲಾಗಿದ್ದು, 25 ಅಂಗಡಿಗಳನ್ನು ತೆರವು ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ, ಸಿಪಿಐ ಎಂ. ಉಮೇಶ, ಸಂಚಾರ ಠಾಣೆಯ ಪಿಎಸ್ಐ ಅಮರಪ್ಪ ಶಿವಬಲ, ನಗರಸಭೆ ಪರಿಸರ ಎಂಜಿನಿಯರ್ ಶರಣಪ್ಪ, ಕಾನ್ಸ್ಟೇಬಲ್ಗಳು ಹಾಗೂ ನಗರಸಭೆ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.