ಸಿಂಧನೂರು: ತಾಲ್ಲೂಕಿನ ಗೊರೇಬಾಳ ಗ್ರಾಮದ ಕುಡಿಯುವ ನೀರಿನ ಕೆರೆಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇರುವ ಅಲ್ಪ ಸ್ವಲ್ಪ ನೀರೂ ದುರ್ವಾಸನೆ ಬೀರುತ್ತಿದೆ.
ತುಂಗಭದ್ರಾ ಎಡದಂಡೆ ನಾಲೆಗೆ ಫೆಬ್ರವರಿ ತಿಂಗಳಿನಲ್ಲಿ ನೀರು ಹರಿಸಿದ ಸಮಯದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶಾಸಕರು ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿಕೊಳ್ಳುವಂತೆ ಆದೇಶ ನೀಡಿದ್ದರು. ಆದರೆ ಆ ಸಮಯದಲ್ಲಿ ಗೊರೇಬಾಳ ಕೆರೆ ಸಂಪೂರ್ಣ ತುಂಬಿರಲಿಲ್ಲ. ಹೀಗಾಗಿ ಈಗ ಪರದಾಟ ಆರಂಬವಾಗಿದೆ.
ಗ್ರಾಮದಲ್ಲಿ 6 ಸಾವಿರಕ್ಕೂ ಹೆಚ್ಚಿನ ಜನರಿದ್ದು ಕೆರೆಯ ನೀರು ದುರ್ವಾಸನೆ ಬೀರುತ್ತಿರುವುದರಿಂದ ಎಲ್ಲ ಕುಟುಂಬಗಳು ಗ್ರಾಮದಲ್ಲಿರುವ ಏಕೈಕ ಶುದ್ಧೀಕರಣ ಘಟಕದ ಮುಂದೆ ನೀರಿಗಾಗಿ ಕಾಯ್ದು ಕುಳಿತುಕೊಳ್ಳಬೇಕಾಗಿದೆ. ಈ ಘಟಕವು ಸಹ ಒಂದೆರಡು ದಿನಗಳಿಂದ ಕಾರ್ಯನಿರ್ವಹಿಸದ ಕಾರಣ ಗ್ರಾಮಸ್ಥರು ನೀರಿಗಾಗಿ ಪರದಾಡಿದ ಸ್ಥಿತಿ ಗಮನಿಸಿದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಆಕ್ರೋಶ ಉಕ್ಕಿ ಬರುತ್ತಿದೆ ಎಂದು ಮಲ್ಲನಗೌಡ ಹೇಳಿದರು.
ಈಗ ಶುದ್ಧೀಕರಣ ಘಟಕವನ್ನು ದುರಸ್ತಿಗೊಳಿಸಲಾಗಿದೆ. ಆದರೆ ಪುನಃ ಘಟಕದಲ್ಲಿ ಏನಾದರೂ ವ್ಯತ್ಯಾಸ ಉಂಟಾಗಿ ದುರಸ್ತಿಗೆ ಬಂದರೆ ಇಡೀ ಗ್ರಾಮಸ್ಥರಿಗೆ ಕುಡಿಯುವ ನೀರೇ ಇಲ್ಲದಂತಾಗುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿದೆ. 6,000ಕ್ಕೂ ಹೆಚ್ಚು ಜನರು ಒಂದೇ ಶುದ್ಧೀಕರಣ ಘಟಕವನ್ನು ಅವಲಂಬಿಸುವುದರಿಂದ ಎಲ್ಲರಿಗೂ ನೀರು ಸಿಗುವುದು ಕಷ್ಟ ಸಾಧ್ಯವಾಗುತ್ತದೆ. ಬೆಳಗಿನಿಂದ ಸಂಜೆಯವರೆಗೆ ಸರದಿಯಲ್ಲಿ ನಿಂತು ನೀರು ತರಬೇಕಾಗಿದೆ. ಈ ಮಧ್ಯೆ ವಿದ್ಯುತ್ ಕಡಿತಗೊಂಡರಂತೂ ನೀರು ತುಂಬಿಕೊಂಡು ಹೋಗಲು ಬಂದವರು ಬರಿ ಕೊಡ ಹಿಡಿದು ಮರಳಿ ಹೋಗಬೇಕಾಗುತ್ತದೆ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಇಲ್ಲಿಯವರೆಗೆ ಕುಡಿಯುವ ನೀರನ್ನು ಪೂರೈಸಲು ಪರ್ಯಾಯ ಕ್ರಮಗಳನ್ನು ಕೈಗೊಂಡಿರುವಂತೆ ಕಾಣುತ್ತಿಲ್ಲ.
ಆದಷ್ಟು ಶೀಘ್ರ ಟ್ಯಾಂಕರ್ ಮುಖಾಂತರವಾಗಲಿ ಅಕ್ಕಪಕ್ಕದ ಕೆರೆಗಳನ್ನು ಸ್ವಾಧೀನ ಪಡಿಸಿಕೊಂಡಾದರೂ ಗ್ರಾಮಸ್ಥರಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕೆರೆಯ ನೀರು ವಾಸನೆ ಬರುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಮಾಡಿದ ಪ್ರಯತ್ನ ಫಲಿಸಲಿಲ್ಲ.ಕುಡಿಯುವ ನೀರಿಗೆ ಇಂತಹ ತಾಪತ್ರೆಯ ಹಿಂದೆಂದೂ ಬಂದಿರಲಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಆಗಾಗ್ಗೆ ಕುಡಿಯುವ ನೀರು ಗ್ರಾಮದ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು ಕಾಳಿಂಗಪ್ಪ ಮಾಸನೂರು ಗ್ರಾಮಸ್ಥ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಫೆಬ್ರುವರಿಯಲ್ಲಿ ಕೆರೆಯ ಸಾಮರ್ಥ್ಯಕ್ಕೆ ತಕ್ಕಂತೆ ನೀರು ತುಂಬಿಸಿ ಕೆಡದಂತೆ ಕ್ರಮ ಕೈಗೊಂಡಿದ್ದರೆ ಗ್ರಾಮಸ್ಥರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲಕೃಷ್ಣೇಗೌಡ ಬೂತಲದಿನ್ನಿ ಗ್ರಾಮಸ್ಥ
ಕುಡಿಯುವ ನೀರಿಗೆ ಇಂತಹ ತಾಪತ್ರೆಯ ಹಿಂದೆಂದೂ ಬಂದಿರಲಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಆಗಾಗ್ಗೆ ಕುಡಿಯುವ ನೀರು ಗ್ರಾಮದ ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕುಕಾಳಿಂಗಪ್ಪ ಮಾಸನೂರು ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.