ಲಿಂಗಸುಗೂರು: ರಸಗೊಬ್ಬರದ ಕೃತಕ ಅಭಾವಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ರೈತರು, ಉತ್ತಮ ಫಸಲು ನಿರೀಕ್ಷೆಯಲ್ಲಿರುವಾಗಲೇ ಮಾರುಕಟ್ಟೆಯಲ್ಲಿ ರಸಗೊಬ್ಬರದ ಅಭಾವ ಎದುರಾಗಿದೆ. ಹಿಂಗಾರು ಬಿತ್ತನೆಗೂ ಸಿದ್ಧತೆಗಳು ನಡೆಯುತ್ತಿವೆ. ರೈತರ ಬೇಡಿಕೆಗೆ ಅಗತ್ಯ ಇರುವಷ್ಟು ಬೀಜ, ಗೊಬ್ಬರ ದಾಸ್ತಾನು ಇಲ್ಲ. ಹೀಗಾಗಿ ರೈತರು ಪರದಾಡುವಂತಾಗಿದೆ ಎಂದು ಗಮನ ಸೆಳೆದರು.
ಬಗರಹುಕುಂ ಸಾಗುವಳಿದಾರರು ಮತ್ತು ಅರಣ್ಯ ಇಲಾಖೆಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ಆದೇಶ ನೀಡಬೇಕು. ಪಹಣಿ ಪತ್ರಿಕೆಯ ಕಬ್ಜಾ ಮತ್ತು ಸಾಗುವಳಿ ಕಾಲಂನಲ್ಲಿ ಸರ್ಕಾರ ಎಂದು ಬರುತ್ತಿದ್ದು ಇದರಿಂದ ರೈತರು ಪರದಾಡುವಂತಾಗಿದೆ. ಕೂಡಲೇ ತಾಂತ್ರಿಕ ತೊಂದರೆ ಸರಿಪಡಿಸಲು ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್ಗಳಲ್ಲಿ ರೈತರು ಬೆಳೆ ಸಾಲ ಪಡೆಯಲು ಪರದಾಡುವಂತಾಗಿದ್ದು, ಕೂಡಲೇ ಅಧಿಕಾರಿಗಳ ಸಭೆ ಕರೆದು ಸಾಲ ಸೌಲಭ್ಯ ನೀಡಲು ಇರುವ ನಿಯಮಗಳನ್ನು ಸರಳೀಕರ ಣಗೊಳಿಸಬೇಕು. ಸಮರ್ಪಕ ವಿದ್ಯುತ್ ಪೂರೈಕೆ, ಸರ್ವೆ ಇಲಾಖೆಯಲ್ಲಿನ ಅರ್ಜಿಗಳ ವಿಲೇವಾರಿ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.