ಸಿಂಧನೂರು: ತುಂಗಭದ್ರಾ ಜಲಾಶಯದ ಎಡದಂಡೆ ನಾಲೆ ವ್ಯಾಪ್ತಿಯ ರೈತರ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಎಡದಂಡೆ ಕಾಲುವೆ ವ್ಯಾಪ್ತಿಗೆ ಬರುವ ರೈತರು ಭತ್ತ ಕಟಾವು ಮಾಡುವ ಮುಂಚೆ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ರೈತರು ಬೆಳೆದ ಭತ್ತದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ಉಪ ಕಾಲುವೆಗಳಲ್ಲಿ ತುಂಬಿರುವ ಹೂಳು ತೆಗೆದು ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕು. ಉಪ ಕಾಲುವೆಗಳ ಸೇತುವೆಗಳು ಹಳೆಯದಾಗಿದ್ದು, ಅವುಗಳ ದುರಸ್ತಿ ಕೆಲಸವನ್ನು ಸಂಬಂಧಪಟ್ಟ ಇಲಾಖೆಯಿಂದ ಕೈಗೆತ್ತಿಕೊಳ್ಳಬೇಕುಎಂದುಆಗ್ರಹಿಸಿದರು.
ಉಪ ಕಾಲುವೆಗಳಲ್ಲಿ ನೀರು ನಿರ್ವಹಣೆ ಮಾಡುವ ಕಾರ್ಮಿಕರ ಕೊರತೆಯಿದ್ದು, ಶೀಘ್ರ ಇನ್ನಷ್ಟು ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಕಾರ್ಮಿಕರ ವೇತನವನ್ನು ಪ್ರತಿ ತಿಂಗಳು ಪಾವತಿಸಬೇಕು. ನೀರಾವರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳ ವಸತಿ ಗೃಹಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಹನುಮಂತ ಹಂಚಿನಾಳ ಕ್ಯಾಂಪ್ ಒತ್ತಾಯಿಸಿದರು.
ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಜಿ.ಸೋಮಲಾಪುರ, ಕಾರಟಗಿ ಅಧ್ಯಕ್ಷ ವೀರೇಶ ಕತ್ತಿ, ಮುಖಂಡರಾದ ಬಸವರಾಜ ಸಿದ್ರಾಂಪುರ, ನಾಗಪ್ಪ ಸಾಲುಂಚಿಮರ, ವಲಿಸಾಬ ಹಾಗೂ ನರಸಪ್ಪ ನಾಯಕ ಇದ್ದರು.