ಬೆಂಗಳೂರು: ಬೆಳಗಾವಿಯಲ್ಲಿ ಎಂಇಎಸ್ ಜತೆ ಶರದ್ ಪವಾರ್ ಕೈಜೋಡಿಸಿದರೆ ಜೆಡಿಎಸ್ ಮತ್ತು ಎನ್ಸಿಪಿ ನಡುವಿನ ಮೈತ್ರಿ ಯತ್ನಕ್ಕೆ ಭಂಗ ಬರಲಿದೆ.
ಶನಿವಾರ ಬೆಳಗಾವಿಯಲ್ಲಿ ಎಂಇಎಸ್ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಶರದ್ ಪವಾರ್ ಭಾಗವಹಿಸುವ ನಿರೀಕ್ಷೆ ಇದೆ. ಇದರಿಂದ ರಾಜ್ಯದ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಧುಮುಕಿರುವ ಜೆಡಿಎಸ್ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಎಂಇಎಸ್ ಸಮಾವೇಶದಲ್ಲಿ ಪವಾರ್ ಭಾಗವಹಿಸುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಬೆಳಗಾವಿಯ ಬಹಳಷ್ಟು ಕನ್ನಡಪರ ಸಂಘಟನೆಗಳು ವಿರೋಧಿಸಿವೆ. ಪವಾರ್ ಸಮಾವೇಶದಲ್ಲಿ ಭಾಗವಹಿಸಿದರೆ ಬೇರೆ ದಾರಿಯೇ ಇಲ್ಲದೆ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ. ಸಮಾವೇಶದಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ವಿಷಯ ಪ್ರಸ್ತಾಪಕ್ಕೆ ಬರಬಹುದು. ಗಡಿ ಮತ್ತು ಭಾಷಾ ವಿಷಯಗಳಲ್ಲಿ ಪವಾರ್ ಎಂಇಎಸ್ ಜತೆ ಸಹಮತ ವ್ಯಕ್ತಪಡಿಸಿದರೆ ಜೆಡಿಎಸ್ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಆಗಿ ಹೋದ ಪವಾರ್, ಚುನಾವಣೆ ಹೊಂದಾಣಿಕೆ ಕುರಿತ ಮಾತುಕತೆಗೆ ಈವರೆಗೂ ಸಂಪರ್ಕಿಸಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ ಎಂಬ ಪಟ್ಟಿಯನ್ನೂ ಎನ್ಸಿಪಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಜೆಡಿಎಸ್ ಹಿರಿಯ ನಾಯಕ ಪಿ.ಜಿ.ಆರ್.ಸಿಂಧ್ಯ, ಪವಾರ್ ಜತೆಗಿನ ವೈಯಕ್ತಿಕ ಸಂಪರ್ಕವನ್ನು ಬಳಸಿ ಚುನಾವಣಾ ಹೊಂದಾಣಿಕೆಗೆ ಪ್ರಯತ್ನ ನಡೆಸಿದ್ದರು.