ರಾಯಚೂರು: ಸುಡುಗಾಡು ಸಿದ್ದ ಸಮುದಾಯದ ಜನರಿಗೆ ನಿವೇಶನ ಹಾಗೂ ವಸತಿ ರಹಿತ ಕುಟುಂಬಗಳಿಗೆ ಸೂರು ನೀಡಿ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಸುಡುಗಾಡು ಸಿದ್ದ ಮಹಾಸಂಘ ಜಿಲ್ಲಾ ಘಟಕದ ನೇತೃತ್ವದಲ್ಲಿ ಸಮಾಜದ ಜನರು ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ತಾತ್ಕಾಲಿಕ ಚಿಕ್ಕ ಜೋಪಡಿ ಹಾಕಿ ಸೋಮವಾರ ಧರಣಿ ನಡೆಸಿದರು.
ರಾಯಚೂರು ಜಿಲ್ಲೆಯಾದ್ಯಂತ ವಾಸಿಸುವ ಸುಡುಗಾಡು ಸಿದ್ದ ಸಮುದಾಯದ ಜನಾಂಗಕ್ಕೆ ಭೂ ಒಡೆತನ ಯೋಜನೆಯಡಿ ಕಳೆದ ಬಾರಿ ಅನ್ಯಾಯವಾಗಿದೆ. ಈ ಬಾರಿ ಸಮುದಾಯದ ಬಡ ಕುಟುಂಬಗಳಿಗೆ ಪ್ರಥಮ ಆದ್ಯತೆ ನೀಡಬೇಕು. ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮ ಪಂಚಾಯತಿಯ ವಾರ್ಡ್ ನಂಬರ್ 7 ರ ಮಾರೆಮ್ಮ ದೇವಿ ಕಾಲೋನಿಯಲ್ಲಿ ಅಂಗನವಾಡಿ ಕೇಂದ್ರ ಕಟ್ಟಡ ಕಳಪೆ ಕಾಮಗಾರಿ ನಿರ್ಮಿಸಿದ್ದು ಮರು ನಿರ್ಮಾಣ ಮಾಡಿಕೊಡಬೇಕು. ಸಮುದಾಯದವರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾರ್ಡ್ ನಂಬರ್ 3, 4 ರಲ್ಲಿ ವಾಸಿಸುವ ಅಲೆಮಾರಿ ಸುಡುಗಾಡು ಸಿದ್ದ ಸಮುದಾಯದ 84 ನಿವೇಶನ ಮತ್ತು ವಸತಿ ರಹಿತ ಕುಟುಂಬಗಳಿಗೆ ಸರ್ಕಾರಿ ಜಮೀನು ಸರ್ವೆ ನಂ . 684 ಮತ್ತು 19/1 ರಲ್ಲಿ 5 ಎಕರೆ ಜಮೀನ ಅನ್ನು ಸುಡುಗಾಡು ಸಿದ್ಧ ಸಮುದಾಯದ ನಿವೇಶನ ರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು. ಸಮುದಾಯ ಭವನ, ರುದ್ರ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.