ರಾಯಚೂರು: ಗುಲಾಬಿ ಕಾಯಿಕೊರಕ ಕೀಡೆಯು ಇತ್ತಿಚೀನ ದಿನಗಳಲ್ಲಿ ಹತ್ತಿಯಲ್ಲಿ ಹೆಚ್ಚಾಗಿ ಹಾನಿಯನ್ನುಂಟು ಮಾಡುತ್ತಿದ್ದು, ಈ ಕೀಟವನ್ನು ಸಮಗ್ರವಾಗಿ ನಿರ್ವಹಿಸಬೇಕು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ. ಚಂದರಗಿ ತಿಳಿಸಿದರು.
ರಾಯಚೂರು ಕೃಷಿ ವಿಜ್ಞಾನ ಕೇಂದ್ರದಿಂದ ಕಿಸಾನ್ ಸಮೃದ್ಧಿ ಕೇಂದ್ರದ ಸಹಯೋಗದೊಂದಿಗೆ ರೈತರು ಹಾಗೂ ರೈತಉತ್ಪಾದಕರ ಸಂಘಗಳ ಪ್ರತಿನಿಧಿಗಳಿಗೆ ಗುರುವಾರ ಆಯೋಜಿಸಿದ್ದ ‘ಹತ್ತಿಯಲ್ಲಿ ಗುಲಾಬಿ ಕಾಯಿಕೊರಕದ ನಿರ್ವಹಣೆ ಹಾಗೂ ಬೇಸಾಯ ಕ್ರಮಗಳು’ ಕುರಿತ ಒಳ ಆವರಣತರಬೇತಿಯಲ್ಲಿ ಮಾತನಾಡಿದರು.
ಹತ್ತಿಯು ಬಿಳಿ ಬಂಗಾರವಾಗಿದ್ದು, ಇದು ಅಧಿಕ ಲಾಭವನ್ನು ಕೊಡುವ ಒಂದು ವಾಣಿಜ್ಯ ಬೆಳೆಯಾಗಿದೆ, ರೈತರು ಹೆಚ್ಚು ಆದಾಯ ಪಡೆಯಬಹುದು. ಆದರೆ, ಹತ್ತಿ ಬೆಳೆ ಬೆಳೆಯುವಲ್ಲಿ ವಾತಾವರಣ, ನೀರು, ಕೀಟರೋಗಳಿಂದ ಸುಮಾರು ತೊಂದರೆಗಳಿದ್ದು ಈಚೆಗೆ ಇಳುವರಿ ಕುಂಠಿತವಾಗುತ್ತಿದೆ ಎಂದು ಹೇಳಿದರು.
ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್, ಮಾತನಾಡಿ, ಹತ್ತಿ ಬೆಳೆಯಲ್ಲಿ ಕೀಟ ಹಾಗೂ ರೋಗ ನಿರ್ವಹಣೆಯಲ್ಲಿ ಜೈವಿಕ ಪೀಡೆನಾಶಕಗಳ ಬಳಕೆ, ಮೋಹಕ ಬಲೆಗಳ ಉಪಯೋಗ, ರಸ ಹೀರುವ ಕೀಟಗಳ ನಿರ್ವಹಣೆಗೆ ಹಳದಿ ಅಂಟಿನ ಬಲೆಗಳ ಉಪಯೋಗ, ಬೇವಿನ ಮೂಲದ ಕೀಟನಾಶಕಗಳ ಸಿಂಪರಣೆ ಹಾಗೂ ಅವಶಕತೆಗೆ ಅನುಗುಣವಾಗಿ ಕೀಟನಾಶಕಗಳ ಸಿಂಪರಣೆ ಕೈಗೊಳ್ಳುವಂತೆ ಸೂಚಿಸಿದರು.
ವಾತಾವರಣ ಅಧ್ಯಯನ ಕೇಂದ್ರದ ವಿಜ್ಞಾನಿ ಡಾ.ಎ.ಜಿ. ಶ್ರೀನಿವಾಸ್ ಮಾತನಾಡಿ, ಗುಲಾಬಿ ಕಾಯಿಕೊರಕದ ನಿರ್ವಹಣೆಗಾಗಿ ವಿಶೇಷ ಕ್ರಮಗಳಾದ ಬಿತ್ತನೆ ಸಮಯ, ಎಕರೆಗೆ 12ರಂತೆ ಮೋಹಕ ಬಲೆಗಳ ಅಳವಡಿಕೆ (ಬೆಳೆ ಒಂದು ತಿಂಗಳಿದಾಗ), ಕೀಟಕುಟುಂಬ ನಿಯಂತ್ರಣ ಪದ್ಧತಿ, ಸಮಯಕ್ಕೆ ಸರಿಯಾಗಿ ತತ್ತಿ ನಾಶಕಗಳ ಸಿಂಪರಣೆ ಹಾಗೂ ಅವಶಕತೆಗೆ ಅನುಗುಣವಾಗಿ ಕೀಟನಾಶಕಗಳ ಸಿಂಪರಣೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಪ್ರಹ್ಲಾದ ಮಾತನಾಡಿ ರೈತಉತ್ಪಾದಕರ ಸಂಘಗಳ ಪ್ರತಿನಿಧಿಗಳು ತರಬೇತಿಯಲ್ಲಿ ಭಾಗವಹಿಸಿರುವುದರಿಂದ, ಇವರುಗಳು ಈ ತರಬೇತಿಯಲ್ಲಿ ಕಲಿತ ವಿಷಯಗಳನ್ನು ಆದಷ್ಟು ಹೆಚ್ಚು ರೈತರಿಗೆ ಮುಟ್ಟಿಸಬೇಕೆಂದು ತಿಳಿಸಿದರು.
ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಅಜಯಕುಮಾರ ಮಾತನಾಡಿ, ಹತ್ತಿ ಬೆಳೆಯಲ್ಲಿ ಉತ್ತಮ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಡಾ.ಜೆ.ಎಂ. ನಿಡಗುಂದಿ ಹತ್ತಿ ಬೆಳೆಯಲ್ಲಿ ಉತ್ತಮ ತಳಿಗಳ ಕುರಿತು ಮಂಡಿಸಿದರು. ಕಿಸಾನ ಸಮೃದ್ಧಿ ಕೇಂದ್ರದ ನಿರ್ದೇಶಕ ಹಸನ ಮುಲ್ಲಾ ಅವರು ಗುಲಾಬಿ ಕಾಯಿಕೊರಕದ ಸಮುದಾಯ ವಿಧಾನದ ನಿರ್ವಹಣೆ ಕುರಿತು ರೈತರಿಗೆ ತಿಳಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ. ಹೇಮಲತಾ ಕೆ.ಜೆ. ಅವರು ವಂದಿಸಿದರು. ಜಿಲ್ಲೆಯ ಒಟ್ಟು 53 ರೈತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.