ರಾಯಚೂರು: ಜಿಲ್ಲೆಗೆ ಏಮ್ಸ್ ಮಂಜೂರು ಮಾಡಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯಿಸಿ ರಾಯಚೂರು ಏಮ್ಸ್ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರ ಶಾಸಕ ಡಾ. ಶಿವರಾಜ ಪಾಟೀಲ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿ ಮನವಿ ಸಲ್ಲಿಸಿದರು.
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಾಸಕ ಡಾ. ಶಿವರಾಜ ಪಾಟೀಲರ ನೇತೃತ್ವದಲ್ಲಿ ನಿಯೋಗ ಭೇಟಿ ಮಾಡಿ ಸಕರಾತ್ಮಕವಾಗಿ ಸ್ಪಂದಿಸಿದ್ದರು. ಅವರ ಮೇಲೆ ಒತ್ತಡ ಹಾಕಿದ್ದರು. ಆದರೆ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡ ನಂತರ ಧಾರವಾಡಕ್ಕೆ ಏಮ್ಸ್ ಮಂಜೂರು ಮಾಡಲು ಹೆಸರು ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಏಮ್ಸ್ ತರಲು ಜವಾಬ್ದಾರಿ ವಹಿಸಬೇಕಾದ ಶಾಸಕರು ವಿಫಲರಾಗಿದ್ದಾರೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಡಾ. ಶಿವರಾಜ ಪಾಟೀಲರು ಆಗಮಿಸಿ ಧರಣಿಯಲ್ಲಿ ಕುಳಿತರು. ‘ಏಮ್ಸ್ ಹೋರಾಟಕ್ಕೆ ನಾನು ಸ್ಪಂದಿಸಿ ಅಂದಿನ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪನವರಿಗೆ ಭೇಟಿ ಮಾಡಿಸಿದ್ದೇನೆ. ಏಮ್ಸ್ ಹೋರಾಟದಲ್ಲಿ ನಾನು ಜೊತೆಯಲ್ಲಿದ್ದೇನೆ. ನನ್ನಂತೆ ಎಲ್ಲಾ ಶಾಸಕರಿಗೂ ಒತ್ತಡ ಹೇರಬೇಕು. ಏಮ್ಸ್ ಮಂಜೂರಿಗೆ ಅಧಿಕಾರ ತ್ಯಾಗಕ್ಕೂ ಸಿದ್ಧ’ ಎಂದು ಹೊರಾಟಗಾರರಿಗೆ ಮನವರಿಕೆ ಮಾಡಿದರು.
ಧರಣಿಯಲ್ಲಿ ಏಮ್ಸ್ ಹೋರಾಟ ಸಮಿತಿಯ ಸಂಚಾಲಕ ಬಸವರಾಜ ಕಳಸ, ಶಿವಕುಮಾರ ಯಾದವ್, ಆರ್.ಕೆ ಅಮರೇಶ, ಮಲ್ಲೇಶ ಗಧಾರ, ವೀರೇಶ ಹೀರಾ, ಚಿನ್ನಯ್ಯಸ್ವಾಮಿ, ಶಾಂತಕುಮಾರ, ಚಂದ್ರು, ವೆಂಕಟೇಶ ಇದ್ದರು.