ರಾಯಚೂರು: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರಿ, ಹೈಕೋರ್ಟ್ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆ ಮಾಡಲು 7ನೇ ವೇತನ ಆಯೋಗ ರಚಿಸಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ವಿವಿಧ ಇಲಾಖೆ ಮತ್ತು ವೃಂದ ಸಂಘಟನೆಗಳ ಒಕ್ಕೂಟ ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಸರ್ಕಾರಿ ನೌಕರರು ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಗುರುವಾರ ಧರಣಿ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಇತರೆ ವೆಚ್ಚಗಳು ಹೆಚ್ಚಾಗುತ್ತಿದ್ದು ಸರ್ಕಾರಿ ನೌಕರರು ಬೆಲೆ ಏರಿಕೆ ಸಮಸ್ಯೆಗೆ ಸಿಲುಕಿದ್ದಾರೆ. ಕೋವಿಡ್ ವೇಳೆಯಲ್ಲಿ ನೌಕರರ ಒಂದು ದಿನದ ವೇತನ ದೇಣಿಗೆಯಾಗಿ ನೀಡುವ ಜೊತೆಗೆ ಜೀವದ ಹಂಗುತೊರೆದು ಕೆಲಸ ಮಾಡಿದ್ದಾರೆ.
6ನೇ ವೇತನ ಆಯೋಗದ ಶಿಫಾರಸುಗಳ ಅವಧಿ 2022 ಜೂನ್ ಅಂತ್ಯಕ್ಕೆ ಐದು ವರ್ಷ ಪೂರ್ಣಗೊಂಡರೂ ಆಯೋಗ ರಚಿಸಲು ಸರ್ಕಾರ ನಿಲುವು ತಳಿದಿಲ್ಲ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ವೇತನ ಸೌಲಭ್ಯ ಕೇಂದ್ರ ಸರ್ಕಾರದ ನೌಕರರಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲಿ ಈಗಾಗಲೇ 9ನೇ ವೇತನ ಆಯೋಗ ಶಿಫಾರಸುಜಾರಿಗೊಂಡಿದ್ದರೂ ಕರ್ನಾಟಕ ರಾಜ್ಯದಲ್ಲಿ 7ನೇ ವೇತನ ಆಯೋಗ ಜಾರಿಯಾಗಿಲ್ಲ ಎಂದು ದೂರಿದರು.
ಧರಣಿಯಲ್ಲಿ ಸಮಿತಿಯ ಅಧ್ಯಕ್ಷ ತಾಯಪ್ಪ ಮರ್ಚೆಟ್ಹಾಳ, ಪ್ರಧಾನ ಕಾರ್ಯದರ್ಶಿ ಮೋಹಿನುದ್ದೀನ್, ಉಪಾಧ್ಯಕ್ಷ ಅಮರೇಶಪ್ಪ ,ನಾರಾಯಣ, ವೆಂಕಟೇಶ, ಜಿಂದಪ್ಪ, ಚಂದ್ರಪ್ಪ, ಮಲ್ಲೇಶ ಇದ್ದರು.