ಮಸ್ಕಿ (ರಾಯಚೂರು): 'ಮಸ್ಕಿ ಕ್ಷೇತ್ರದಲ್ಲಿ 5ಎ ಕಾಲುವೆ ನಿರ್ಮಾಣ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಈಗ ಉದ್ಭವವಾಗಿದ್ದಲ್ಲ. 16 ವರ್ಷಗಳಿಂದ ಸಮಸ್ಯೆಯಿದ್ದರೂ ಕಾಂಗ್ರೆಸ್ ಸರ್ಕಾರ ಏಕೆ ಸ್ಪಂದಿಸಿ ಕೆಲಸ ಮಾಡಿಲ್ಲ' ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
'ಕಾಂಗ್ರೆಸ್ ನಾಯಕರು ಈಗ ಕ್ಷೇತ್ರದಲ್ಲಿ ಜನರನ್ನು ಭೇಟಿ ಮಾಡಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಜನರು ಇದನ್ನು ನಂಬಬಾರದು. ಯಡಿಯೂರಪ್ಪ ಅವರು ನೀರಾವರಿ ಮಾಡಿಕೊಡಲು ಬದ್ಧರಾಗಿದ್ದಾರೆ' ಎಂದರು.
'ಹಣ ಕೊಟ್ಟು ಚುನಾವಣೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುವ ಮೂಲಕ ಈ ಕ್ಷೇತ್ರದ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಹತಾಶೆಯಿಂದ ಕಾಂಗ್ರೆಸ್ ನಾಯಕರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ' ಎಂದು ಹೇಳಿದರು.
'ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡಿವೆ ಎಂಬುದನ್ನು ನೋಡಿ ಜನರು ಮತ ಕೊಡಲಿ. ಕಳೆದ ಒಂದು ವರ್ಷ ಅವಧಿಯಲ್ಲಿ ಮಸ್ಕಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತಾಪಗೌಡ ಅವರು ತಂದಿರುವ ಅನುದಾನ ₹ 1,600 ಕೋಟಿ. ಅಭಿವೃದ್ಧಿ ನೋಡಿ ಜನರು ಮತ ಕೊಡುವ ವಿಶ್ವಾಸವಿದೆ' ಎಂದು ತಿಳಿಸಿದರು.