ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿತ್ತಿರುವ ಕಾರಣ ಹಾನಿಗೊಳಗಾದ ತಾಲ್ಲೂಕಿನ ನದಿಪಾತ್ರದ ಗ್ರಾಮಗಳಿಗೆ ಸಂಸದ ಕೆ.ಶಿವರಾಮಗೌಡ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಸಿಂಗಾಪುರ ಹಾಗೂ ಮುಕ್ಕುಂದಾ ಗ್ರಾಮಗಳಿಗೆ ತೆರಳಿದ ಅವರು, ನದಿ ನೀರಿನಲ್ಲಿ ಮುಳುಗಡೆಯಾದ ರೈತರ ಪಂಪ್ಸೆಟ್, ಬತ್ತದ ಗದ್ದೆಗಳನ್ನು ವೀಕ್ಷಿಸಿದರು.
ನಂತರ ಸುದ್ದಿಗಾರರೊಂದಿಗೆಮಾತನಾಡಿ, `ನದಿಪಾತ್ರದಲ್ಲಿ ಬತ್ತದ ಗದ್ದೆಗಳು ಮುಳುಗಡೆಯಾಗಿವೆ. ಅಪಾಯ ಮಟ್ಟ ಮೀರಿ ನೀರು ಬರುವ ಮೊದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ. 36/3 ವಿತರಣಾ ಕಾಲುವೆ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರಕ್ಕೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.
ತಹಶೀಲ್ದಾರ ಬಿ.ಟಿ.ಕುಮಾರಸ್ವಾಮಿ, ಉಪತಹಶೀಲ್ದಾರ ಕನಕಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ಕಲ್ಲೂರು ಬಸಪ್ಪ, ನಗರ ಘಟಕ ಅಧ್ಯಕ್ಷ ಮಧ್ವರಾಜ್ ಆಚಾರ್, ಶಿವಬಸನಗೌಡ ಮತ್ತಿತರರು ಇದ್ದರು.