ಜಾಲಹಳ್ಳಿ: ದೇಶದಲ್ಲಿ ದುಡಿಯುತ್ತಿರುವ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಒದಗಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ವಿಫಲವಾಗಿವೆ ಎಂದು ಸಿಐಟಿಯು ಜಿಲ್ಲಾ ಮುಖಂಡ ಗಿರಿಯಪ್ಪ ಪೂಜಾರಿ ಆರೋಪಿಸಿದ್ದಾರೆ.
ಅವರು ಮಂಗಳವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಮಿಕರು ಮಾಡುವ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ, ಅವರಿಗೆ ಸಾಮಾಜಿಕ ಭದ್ರತೆ ಇಲ್ಲವಾಗಿದ್ದು ದೇಶವನ್ನಾಳುವ ಪ್ರಮುಖ ಪಕ್ಷಗಳು ಕಾರ್ಮಿಕರ ಬಗ್ಗೆ ನಿಷ್ಕಾಳಜಿ ತೋರಿಸುತ್ತಿವೆ ಎಂದರು. ಅದಕ್ಕಾಗಿ ಕಾರ್ಮಿಕರು ಒಗ್ಗಟ್ಟಾಗಿ ಹೋರಾಡುವ ಮೂಲಕ ತಮ್ಮ ಹಕ್ಕುಗಳನ್ನು ತಾವೇ ಕೇಳಿ ಪಡೆಯಬೇಕೆಂದು ಅವರು ಇದೇ ಸಂದರ್ಭದಲ್ಲಿ ಕಾರ್ಮಿಕರಿಗೆ ಸಲಹೆ ನೀಡಿದರು. ಹಮಾಲರ ಸಂಘದ ಅಧ್ಯಕ್ಷ ಯಂಕೋಬ ಬೈಚ್ಬಾಳ ಧ್ವಜಾರೋಹಣ ನೆರವೇರಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ತಿಪ್ಪಯ್ಯ ನಾಯಕ, ರಂಗಪ್ಪ ತ್ಯಾಪ್ಲಿ, ಖಾಜಾಹುಸೇನ್, ಶೈಲೇಶ್ ಕುಮಾರ ಘನತೆ, ಸಂಗಮೇಶ ಮೂಲಿಮನಿ, ಶಬ್ಬೀರ್ಅಹ್ಮದ್, ವಿಠೋಬ ಮಾಳೆ, ರಂಗಪ್ಪ ಬಂಡಿ ಸೇರಿದಂತೆ ಅನೇಕ ಕಾರ್ಮಿಕರು ಉಪಸ್ಥಿತರಿದ್ದರು.