ರಾಯಚೂರು: ನಮ್ಮದು ಮೊದಲೇ ಬಡ ಕುಟುಂಬ... ಪಾರ್ಶ್ವವಾಯು ರೋಗಕ್ಕೆ ತುತ್ತಾದ ತಂದೆ ತೀರಿ ಹೋದರು... ಆರ್ಥಿಕ ಸ್ಥಿತಿ ಮತ್ತಷ್ಟು ಗಂಭೀರವಾಯಿತು... ಗಂಗಾವತಿ ಸಮೀಪದ ಶ್ರೀರಾಮನಗರದ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಷಯ ವ್ಯಾಸಂಗಕ್ಕೆ ಪ್ರವೇಶ ದೊರಕಿತು. ಶಿಕ್ಷಣ ಶುಲ್ಕವನ್ನು ಸಂಸ್ಥೆಯೇ ಭರಿಸಿ ನನ್ನನ್ನು ಪ್ರೋತ್ಸಾಹಿಸಿತು... ಈಗ ಬೆಂಗಳೂರಿನಲ್ಲಿ ಡಾ.ಅಂಬೇಡ್ಕರ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ವಿಭಾಗದ ಎಂಜಿನಿಯರಿಂಗ್ ವಿದ್ಯಾರ್ಥಿನಿ....
- ಇದು ಗಂಗಾವತಿಯ ಎಂಜನಿಯರಿಂಗ್ ವಿದ್ಯಾರ್ಥಿನಿ ಸುಧಾ ಅವರು ಹೇಳಿದ ನುಡಿ. ಶನಿವಾರ ನಗರದ ಐಎಂಎ ಸಭಾಭವನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನೆರವಿನಡಿ ನವಜೀವನ ಮಹಿಳಾ ಒಕ್ಕೂಟ ಮತ್ತು ಪ್ರೇರಣಾ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ಧ ಹೈ.ಕ ಭಾಗದ ಬಡ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಚೆಕ್ ಸ್ವೀಕರಿಸಿ ಮಾತನಾಡಿದರು.
ಈ ದಿನ ಇನ್ಫೋಸಿಸ್ ಪ್ರತಿಷ್ಠಾನ ನೆರವಿನಡಿ ನವಜೀವನ ಮಹಿಳಾ ಒಕ್ಕೂಟ ಮತ್ತು ಪ್ರೇರಣಾ ಸಂಸ್ಥೆ ನನ್ನನ್ನು ಗುರುತಿಸಿ ಶಿಷ್ಯ ವೇತನ ದೊರಕಿಸುತ್ತಿರುವುದಕ್ಕೆ ಕೃತಜ್ಞಳಾಗಿದ್ದೇನೆ... ಇದು ನನ್ನ ಓದಿಗೆ ಸಹಕಾರಿ ಆಗಲಿದೆ ಎಂದು ವಿದ್ಯಾರ್ಥಿನಿ ಸುಧಾ ಹೇಳಿದರು.
ಅದೇ ರೀತಿ ಮತ್ತೊಬ್ಬ ವಿದ್ಯಾರ್ಥಿನಿ ಸೇಡಂ ತಾಲ್ಲೂಕಿನ ಮುಧೋಳ ಗ್ರಾಮದವರಾದ ಹಾಗೂ ದಾವಣಗೆರೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ನಗ್ಮಾ ಹೇಳಿದ್ದು ಹೀಗೆ:
ನಾನು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡೆ. ಕುಟುಂಬದ ಜವಾಬ್ದಾರಿ ತಾಯಿ ಮೇಲೆಯೇ ಇತ್ತು. ಕೈ ಮಗ್ಗದಲ್ಲಿ ದುಡಿಮೆ ಮಾಡಿ ಜೀವನ ನಡೆಸುತ್ತ ಬಂದೆವು. ಆರ್ಥಿಕ ಸಂಕಷ್ಟ ವ್ಯಾಸಂಗಕ್ಕೆ ತೊಂದರೆ ಸ್ಥಿತಿ ಎದುರಾಗುತ್ತ ಬಂದವು. ಸಂಕಷ್ಟದಲ್ಲೂ ತಾಯಿ ಓದಿಸಿದರು. ಈಗ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು. ಈ ಶಿಷ್ಯವೇತನ ಪೂರ್ಣ ತಮ್ಮ ವ್ಯಾಸಂಗಕ್ಕೆ ಉಪಯುಕ್ತ ಆಗಲಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದರು.