ರಾಮನಗರ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 1ರಿಂದ 22ರವರೆಗೆ ನಡೆಯಲಿರುವ ಪರೀಕ್ಷೆಯನ್ನು ಈ ಸಲ ಜಿಲ್ಲೆಯಲ್ಲಿ 8,733 ವಿದ್ಯಾರ್ಥಿಗಳು ಎದುರಿಸಲಿದ್ದಾರೆ.
ತಿಂಗಳ ಹಿಂದೆಯೇ ವೇಳಾಪಟ್ಟಿ ಪ್ರಕಟವಾಗಿದ್ದು, ಕಾಲೇಜುಗಳಲ್ಲಿ ಪಾಠ–ಪ್ರವಚನ ಎಲ್ಲವೂ ಮುಗಿದಿದೆ. ಭವಿಷ್ಯದ ಮಾರ್ಗಸೂಚಿಯಾದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ.
ಸಕಲ ಸಜ್ಜು: ‘ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಇಲಾಖೆ ಎಲ್ಲಾ ರೀತಿಯಲ್ಲಿ ತಯಾರಿ ನಡೆಸಿ ಸಜ್ಜಾಗಿದೆ. ರಾಮನಗರದ 5, ಚನ್ನಪಟ್ಟಣ 3, ಕನಕಪುರ 2, ಮಾಗಡಿ 2 ಹಾಗೂ ಹಾರೋಹಳ್ಳಿ 1 ಪರೀಕ್ಷಾ ಕೇಂದ್ರಗಳು ಸೇರಿದಂತೆ ಒಟ್ಟು 13 ಕಡೆ ಪರೀಕ್ಷೆ ನಡೆಯಲಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕಿ ನಾಗಮ್ಮ ಎಂ.ಪಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಸಲ ಪರೀಕ್ಷೆ ಬರೆಯುತ್ತಿರುವವರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ವಿಭಾಗದಿಂದ 3,556, ಕಲಾ ವಿಭಾಗದಲ್ಲಿ 2,144 ಹಾಗೂ ವಾಣಿಜ್ಯದಲ್ಲಿ 2,052 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ’ ಎಂದರು.
‘ಪರೀಕ್ಷೆ ಎದುರಿಸುವವರ ಪೈಕಿ 4,286 ಬಾಲಕಿಯರು ಹಾಗೂ 3,476 ಬಾಲಕರಿದ್ದಾರೆ. ಈ ಸಲ ಮರು ಪರೀಕ್ಷೆಗೆ ಹಾಜರಾಗುತ್ತಿರುವವರು 715 ಹಾಗೂ ಖಾಸಗಿಯಾಗಿ ಪರೀಕ್ಷೆ ಎದುರಿಸುವವರು 256 ಮಂದಿ ಇದ್ದಾರೆ’ ಎಂದು ಹೇಳಿದರು.
ಅಂಕಿ ಅಂಶ... 7,762 ಹೊಸದಾಗಿ ಪರೀಕ್ಷೆ ಎದುರಿಸುವ ಒಟ್ಟು ವಿದ್ಯಾರ್ಥಿಗಳು 4,286 ಬಾಲಕಿಯರು 3,476 ಬಾಲಕರು 715 ಮರು ಪರೀಕ್ಷೆ ಎದುರಿಸುವವರು 256 ಖಾಸಗಿಯಾಗಿ ಪರೀಕ್ಷೆ ಎದುರಿಸುವವರು
ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕೇಂದ್ರಗಳ ಮೇಲೆ ನಿಗಾ ಇಡಲು ವಿಶೇಷ ಜಾಗೃತ ದಳ ರಚನೆ ಮಾಡಲಾಗಿದೆ– ನಾಗಮ್ಮ ಎಂ.ಪಿ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.