ಬಿಡದಿ: ಬೈರಮಂಗಲ ಗ್ರಾಮದಲ್ಲಿ ಭಾನುವಾರ ಸರಳವಾಗಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ನಡೆಯಿತು.
ಸಮತಾ ಸೈನಿಕ ದಳದ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಅಂಬೇಡ್ಕರ್ ಅರ್ಥಶಾಸ್ತ್ರಜ್ಞ, ಶಿಕ್ಷಣ ತಜ್ಞ ಹಾಗೂ ಕಾನೂನು ತಜ್ಞರಾಗಿದ್ದರು. ವಿಶ್ವದ ಹಲವು ದೇಶಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಾಗುತ್ತದೆ. ಅವರು ಜ್ಞಾನದ ಭಂಡಾರ. ಅಂತಹ ಮೇರುವ್ಯಕ್ತಿಯನ್ನು ಮನುವಾದಿಗಳು ಜಾತಿಯ ಕಣ್ಣಿನಲ್ಲಿ ನೋಡುವುದು ಸರಿಯಲ್ಲ ಎಂದರು.
‘ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯ’ ಎಂದು ಹೇಳಿದರು.
ಸಂಯುಕ್ತ ವ್ಯವಸ್ಥೆ ಪ್ರತಿಪಾದಿಸುವ ಏಕತೆ ಮತ್ತು ಸಮಗ್ರತೆಯ ಆಧಾರದಲ್ಲಿ ಅಂಬೇಡ್ಕರ್ ಅವರು ಭಾರತಕ್ಕೆ ಬೃಹತ್ ಸಂವಿಧಾನ ರಚಿಸಿಕೊಟ್ಟರು. ದೇಶದ ಮೊದಲ ಕಾನೂನು ಸಚಿವರಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಮತ್ತು ಸಮಾನ ಅವಕಾಶ ದೊರಕಿಸಿಕೊಟ್ಟರು. ಕಾರ್ಮಿಕರಲ್ಲಿ ಹೋರಾಟದ ಕಿಚ್ಚು ಹಚ್ಚಿದ ಅವರು ಎಲ್ಲ ನಾಗರಿಕರಿಗೂ ಆದರ್ಶಪ್ರಾಯ ಎಂದರು.
ಮೌಢ್ಯ ಅಳಿಸಿ ಹಾಕಲು ಶಿಕ್ಷಣವೇ ಅಸ್ತ್ರ ಎಂದು ಪ್ರತಿಪಾದಿಸಿದ ಹೆಗ್ಗಳಿಕೆ ಅವರದ್ದು. ಭಾರತದಲ್ಲಿ ಆರ್ಥಿಕ ಸುರಕ್ಷತೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಮಾರ್ಗದರ್ಶಿ ಸೂತ್ರ ಒದಗಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮತಾ ಸೈನಿಕ ದಳದ ಲಕ್ಷ್ಮಣ ಕಲ್ಬಾಳ್, ನಾಗೇಶ್, ಯಡವನಹಳ್ಳಿ ಚಂದ್ರು, ಮುಖಂಡರಾದ ಗುರುಮೂರ್ತಿ, ವಿಜಯಕುಮಾರ್, ಕೃಷ್ಣ, ಆನಂದ್, ಯೋಗಾನಂದ, ನವೀನ್, ಸೋಮಶೇಖರ್, ಶಿವಾನಂದ ಹಾಜರಿದ್ದರು.