ಕನಕಪುರ: ಬಿಜೆಪಿಯ ಗೆಲುವು ಕೇವಲ ಪಕ್ಷದ ಅಥವಾ ನರೇಂದ್ರ ಮೋದಿಯವರ ಗೆಲುವಲ್ಲ, ಇದು ರಾಷ್ಟ್ರದ ಗೆಲುವಾಗಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನ ಬಯಸಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜಗನ್ನಾಥ್. ಎಸ್ ಹೇಳಿದರು.
ನಗರದ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಬಳಿ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಅತ್ಯಧಿಕ ಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಪಟಾಕಿ ಸಿಡಿಸಿ ಸಿಹಿ ಹಂಚಿ ಮಾತನಾಡಿದರು.
ಮೋದಿ ಅವರಿಗೆ ಗೆಲುವಾಗುತ್ತಿದ್ದಂತೆ ವಿಶ್ವದ ಬೇರೆ ಬೇರೆ ದೇಶದ ಪ್ರಧಾನಿಗಳು ಮೋದಿ ಅವರಿಗೆ ಶುಭಾಷಯ ಕೋರಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಕ್ಷವನ್ನು ಗೆಲ್ಲಿಸಿದ ದೇಶದ ಹಾಗೂ ರಾಜ್ಯದ ಜನತೆಗೆ ನಮಸ್ಕರಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಜನಾಭಿಪ್ರಾಯವಿಲ್ಲದೆ ತಿರಸ್ಕಾರಗೊಂಡಿದ್ದ ಎರಡೂ ಪಕ್ಷಗಳು ಜತೆಯಾಗಿ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿವೆ. ಈಗ ಎರಡು ಪಕ್ಷಗಳನ್ನು ವಿರೋಧಿಸಿ ರಾಜ್ಯದ ಜನತೆ ಇಂದು ಪಕ್ಷವನ್ನು ಸಂಪೂರ್ಣವಾಗಿ ಆಶೀರ್ವದಿಸಿದ್ದಾರೆ ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಶಿವರಾಮ್, ನಗರ ಘಟಕದ ಅಧ್ಯಕ್ಷ ನಾಗಾನಂದ, ಜಿಲ್ಲಾ ಮುಖಂಡರಾದ ಡಿ. ಶ್ರೀನಿವಾಸ್, ಶಿವಲಿಂಗಯ್ಯ, ರವೀಂದ್ರ ಬಾಬು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸ್ವಾಮಿ, ಆಟೋಕುಮಾರ್, ಮುಖಂಡರಾದ ಕೆಂಪಣ್ಣ, ಕೋಟೆ ಮಂಜು, ಸೀರೇಗೌಡ, ಸಿದ್ದಮರೀಗೌಡ ಮೊದಲಾದವರು ಉಪಸ್ಥಿತರಿದ್ದರು.