ಕನಕಪುರ: ಆಸ್ತಿ ಕ್ರಯಪತ್ರಗಳು ನೋಂದಣಿ ಸರಿಯಾಗಿ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಜನರು ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿಗಳನ್ನು ಕೂಡಿ ಹಾಕಿ ಬೀಗ ಜಡಿದ ಘಟನೆ ಸೋಮವಾರ ನಡೆದಿದೆ.
ಸುಮಾರು 15 ದಿನಗಳಿಂದ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಯಾವುದೇ ನೋಂದಣಿ ಕಾರ್ಯ ಸರಿಯಾಗಿ ಆಗುತ್ತಿರಲಿಲ್ಲ. ಈ ಬಗ್ಗೆ ಸಾರ್ವಜನಿಕರು ಉಪ ನೊಂದಣಾಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆ ಸರಿಪಡಿಸುವಂತೆ ಒತ್ತಾಯಿಸುತ್ತಿದ್ದರು. ಆದರೆ, ಸಮಸ್ಯೆ ಬಗೆಹರಿದಿರಲಿಲ್ಲ. ರೋಸಿ ಹೋಗಿಸಿಟ್ಟಿಗೆದ್ದ ಕೆಲವು ಯುವಕರು ಕಚೇರಿಯಿಂದ ಹೊರಬಂದು ಹೊರಗಡೆಯಿಂದ ಕಚೇರಿಗೆ ಬೀಗ ಜಡಿದರು. ಸಮಸ್ಯೆ ಸರಿಪಡಿಸುವ ತನಕ ಬಾಗಿಲು ತೆಗೆಯುವುದಿಲ್ಲವೆಂದು ಎಚ್ಚರಿಸಿದರು. ರಸ್ತೆಯಲ್ಲಿ ಟೈರ್ಗಳನ್ನಿಟ್ಟು ಪ್ರತಿಭಟನೆ ನಡೆಸಿದರು.
‘ಒಂದು ಗಂಟೆಯಾದರೂ ಕಚೇರಿಯ ಬೀಗ ತೆಗೆಯದಿದ್ದಾಗ ನೋಂದಣಾಧಿಕಾರಿಗಳು ಕಚೇರಿ ಬೀಗ ತೆಗೆಸಲು’ ಎಂದು ಪೊಲೀಸರ ಮೊರೆಹೋದರು.
ಕಾರ್ಯ ಪ್ರವೃತ್ತರಾದ ಡಿವೈಎಸ್ಪಿ ಓಂಪ್ರಕಾಶ್, ಸರ್ಕಲ್ ಇನ್ಸ್ಪೆಕ್ಟರ್ ಆರ್.ಪ್ರಕಾಶ್, ಎಸ್.ಐ.ಗಳಾದ ವಿ.ಭಾಸ್ಕರ್, ಜಯಣ್ಣ ಕಚೇರಿಯ ಬೀಗ ತೆಗೆಸಿದರು.
ಪ್ರಕರಣದ ಬಗ್ಗೆ ಉಪ ನೋಂದಣಾಧಿಕಾರಿ ಹನುಮಂತಪ್ಪ ಎನ್. ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದರು.
ಘಟನೆಯಲ್ಲಿ ಪಾಲ್ಗೊಂಡಮೇಗಳಬೀದಿ ಸಂತೋಷ, ಎಂ.ಜಿ.ರಸ್ತೆಯ ಮಣಿಕುಮಾರ್, ಮಹದೇಶ್ವರ ಬಡಾವಣೆಯ ವಿನಯ್, ಬಾಣಂತಮಾರಮ್ಮ ಬಡಾವಣೆಯ ಪವನ್ಕುಮಾರ್, ಎಸ್.ಕರಿಯಪ್ಪ ಲೇಔಟ್ನ ಮಧುಸೂದನ್ ಎಂಬುವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.