ಕನಕಪುರ: ‘ಧರ್ಮವನ್ನು ಯಾರೂ ಬಿಡಬಾರದು, ನಮ್ಮ ನಮ್ಮ ಧರ್ಮ ನಮಗೆ ಮುಖ್ಯ. ಹಾಗೆಂದು ಬೇರೆ ಧರ್ಮವನ್ನು ದ್ವೇಷಿಸಬಾರದು. ಯಾವ ಧರ್ಮದಲ್ಲೂ ಬೇರೆ ಧರ್ಮವನ್ನು ದ್ವೇಷಿಸಬೇಕೆಂದು ಎಲ್ಲೂ ಹೇಳಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿ ಆಡನಕುಪ್ಪೆ ಗ್ರಾಮದಲ್ಲಿರುವ ವೀರಭದ್ರ ದೇವಾಲಯದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ರಾಜಗೋಪುರದ ಭೂಮಿಪೂಜೆ ಕಾರ್ಯಕ್ರಮವನ್ನು ಬುಧವಾರ ನೆರವೇರಿಸಿ ಮಾತನಾಡಿದರು.
ಆಡನಕುಪ್ಪೆ ಗ್ರಾಮದಲ್ಲಿ ನೆಲೆಸಿರುವ ವೀರಭದ್ರ ದೇವಾಲಯವು ಪುರಾತನವಾದ ದೇವಾಲಯವಾಗಿದೆ. ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದನ್ನು ಶ್ಲಾಘಿಸುತ್ತೇನೆ ಎಂದರು.
ವೀರಭದ್ರ ಶಿವನ ಇನ್ನೊಂದು ಅವತಾರವಾಗಿದೆ. ಭಕ್ತಿ ಮತ್ತು ಭಗವಂತನನ್ನು ಒಂದು ಕಡೆ ಸೇರಿಸುವುದೇ ದೇವಾಲಯಗಳು. ಇಂತಹ ದೇವಾಲಯದ ಮುಂಭಾಗದಲ್ಲಿ ಬೃಹತ್ ರಾಜಗೋಪುರ ನಿರ್ಮಾಣ ಕೈಗೊಳ್ಳಲಾಗಿದೆ. ನನ್ನ ಕಡೆಯಿಂದಲೂ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಬಿಲ್ವಪತ್ರೆ ಮಠದ ಶಿವಲಿಂಗ ಸ್ವಾಮೀಜಿ, ದೇವಸ್ಥಾನದ ಅರ್ಚಕರಾದ ಪರಶಿವಯ್ಯ, ವೀರಭದ್ರ, ಸೇರಿದಂತೆ ದೇವಸ್ಥಾನದ ಭಕ್ತರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.