ಮಾಗಡಿ: ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನುಗಳಲ್ಲಿ ಎರಡು ಚಿರತೆ ಸೆರೆಯಾಗಿವೆ. ಸೋಲೂರು ಹೋಬಳಿಯ ಗೆಜಗಲ್ ಪಾಳ್ಯದ ಬಳಿ ಇಟ್ಟಿದ್ದ ಬೋನಿಗೆ 7 ವರ್ಷದ ಹೆಣ್ಣು ಚಿರತೆ ಮತ್ತು ತಾಂಡವನಪುರ ಬಳಿ ಇಟ್ಟಿದ್ದ ಬೋನಿಗೆ 10 ವರ್ಷದ ಗಂಡು ಚಿರತೆ ಬಿದ್ದಿವೆ ಎಂದು ಉಪ ಅರಣ್ಯ ಅಧಿಕಾರಿ ಚಿದಾನಂದ್ ತಿಳಿಸಿದರು.
ಮೂರು ದಿನಗಳ ಹಿಂದೆ ಎರಡು ಗ್ರಾಮಸ್ಥರ ಮನವಿಯ ಮೇರೆಗೆ ಬೋನು ಇಟ್ಟಿದ್ದೆವು. ಬೋನಿಗೆ ಚಿರತೆಗಳು ಬಿದ್ದಿರುವುದನ್ನು ಗ್ರಾಮಸ್ಥರು ಭಾನುವಾರ ಬೆಳಿಗ್ಗೆ ತಿಳಿಸಿದರು. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಟೆಂಪೊಗಳಲ್ಲಿ ಚಿರತೆಯ ಬೋನುಗಳನ್ನು ಕಚೇರಿಯ ಆವರಣಕ್ಕೆ ತರಲಾಯಿತು. ರಾತ್ರಿ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವನಪಾಲಕರಾದ ಯತೀಶ್, ಸಿದ್ದರಾಜು, ಗೋವಿಂದ, ಚಂದ್ರು, ವಾಹನ ಚಾಲಕ ವೆಂಕಟೇಶ್ ಇದ್ದರು.