ಮಾಗಡಿ: ‘ಜೀವನದುದ್ದಕ್ಕೂ ಸತ್ಯ, ಅಹಿಂಸೆ ಬೋಧಿಸಿ, ಅದನ್ನೆ ಉಸಿರಾಗಿಸಿಕೊಂಡವರು ಮಹಾತ್ಮ ಗಾಂಧಿ’ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಚನ್ನೇಗೌಡ ಹೇಳಿದರು.
ಇಲ್ಲಿನ ಗಂಗಾಧರೇಶ್ವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಘದ ವತಿಯಿಂದ ಬುಧವಾರ ನಡೆದ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೇವಲ ತತ್ವಾದರ್ಶಗಳ ಬೋಧಕರಾಗದೇ ಪಾಲಕರಾದ ಮೇರು ವ್ಯಕ್ತಿತ್ವದ ಗಾಂಧಿ ಹಚ್ಚಿಟ್ಟ ದೀಪದಲ್ಲಿ ಬದುಕು ಕಂಡ ಸಾಧಕರು ಬಹಳ ಇದ್ದಾರೆ. ಇತರರ ಒಳಿತಿಗೆ ದುಡಿಯುವುದೂ ಮುಖ್ಯ ಎಂಬ ಬಾಪೂಜಿ ಅವರ ಮಾತು ಸಾರ್ವಕಾಲಿಕ ಸತ್ಯ. ಯುವನಜನರು ಗಾಂಧಿ ಮತ್ತು ಶಾಸ್ತ್ರಿಯವರ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು.
ಗಣಿತ ಶಿಕ್ಷಕ ಪಿ.ಟಿ.ರಂಗಯ್ಯ ಮಾತನಾಡಿ, ‘ಗಾಂಧಿ ಹೋರಾಟದ ಸ್ಫೂರ್ತಿಯಾಗಿದ್ದರು. ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್, ವರ್ಣಬೇಧ ನೀತಿ ವಿರುದ್ದ ಹೋರಾಡಿದ್ದ ನೆಲ್ಸನ್ ಮಂಡೇಲಾ, ಅಮೇರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರಿಗೂ ಗಾಂಧಿ ಸ್ಪೂರ್ತಿಯಾಗಿದ್ದರು. ಅವರಂತೆ ವಿದ್ಯಾರ್ಥಿಗಳು ಕಠಿಣ ಶ್ರಮದ ಮೂಲಕ ಗುರಿ ಮುಟ್ಟಲು ಶ್ರಮಿಸಬೇಕು’ ಎಂದರು.
9ನೆ ತರಗತಿ ವಿದ್ಯಾರ್ಥಿನಿ ವನಜಾ, 8ನೇ ತರಗತಿ ಕುಸುಮ, ಚೈತನ್ಯ, 10ನೇ ತರಗತಿ ಎಸ್.ರಂಜಿತ, ಶಿಕ್ಷಕರಾದ ಕಿರಣ್, ರಂಜನಿ, ಕುಮಾರ್, ಸಿದ್ದಪ್ಪ, ಪೂರ್ಣಿಮಾ, ಚಿಕ್ಕರಂಗಯ್ಯ ಮಾತನಾಡಿದರು. ಗಾಂಧಿ ಮತ್ತು ಶಾಸ್ತ್ರೀ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.