ಚನ್ನಪಟ್ಟಣ: ಶಾಲೆ ತೆರೆಯದಿದ್ದರೂ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಧನಸಹಾಯ ಮತ್ತು ದಿನಸಿ ಕಿಟ್ ನೀಡುತ್ತಿರುವುದು ಮಾನವೀಯ ಕಾರ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸು.ತ.ರಾಮೇಗೌಡ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ಡಾ.ಎಚ್.ಕೆ. ಶಾಂತಾ ಮರಿಯಪ್ಪ ಕಾನ್ವೆಂಟ್ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಿಬ್ಬಂದಿಗೆ ಧನಸಹಾಯ, ದಿನಸಿ ಕಿಟ್ ವಿತರಿಸಿಮಾತನಾಡಿದರು.
ಕೊರೊನಾ ವೇಳೆ ಶಾಲೆಗಳು ಮುಚ್ಚಿದ್ದರಿಂದ ಹಲವಾರು ಮಂದಿಗೆ ತೊಂದರೆ ಎದುರಾಯಿತು. ಅದರಲ್ಲೂ ಖಾಸಗಿ ಶಾಲೆಗಳ ಶಿಕ್ಷಕರು ಬಹಳ ತೊಂದರೆ ಎದುರಿಸುವಂತಾಯಿತು. ಇಂತಹ ವೇಳೆ ಕಾನ್ವೆಂಟ್ ಆಡಳಿತ ಮಂಡಳಿ ಶಾಲೆ ತೆರೆಯದಿದ್ದರೂ ಶಿಕ್ಷಕರು, ಸಿಬ್ಬಂದಿಗೆ ₹ 5 ಸಾವಿರ ಧನಸಹಾಯ, ದಿನಸಿ ಕಿಟ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಪ್ರತಿಯೊಂದು ಖಾಸಗಿ ಶಾಲೆಗಳು ಇಂತಹ ಮಾನವೀಯ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಎಚ್.ಕೆ. ವೀರಣ್ಣಗೌಡ ಶಾಲೆಯ ಮುಖ್ಯ ಶಿಕ್ಷಕ ಶೌಕತ್ ಅಲಿ ಮಾತನಾಡಿ, ಮರಿಯಪ್ಪ ಅವರು ಬಡವರ ಮೇಲೆ ಕರುಣೆ ತೋರುವಂತಹ ಹೃದಯವಂತರು ಎಂದರು.
ಕಾನ್ವೆಂಟ್ನ ಮುಖ್ಯ ಶಿಕ್ಷಕ ವರದರಾಜು ಮಾತನಾಡಿ, ಕಳೆದ ಒಂದೂವರೆ ವರ್ಷಗಳ ಕಾಲ ಶಾಲೆ ತೆರೆಯದ ಕಾರಣ ಶಿಕ್ಷಕರು, ಸಿಬ್ಬಂದಿಸಂಕಷ್ಟವನ್ನು ಅರಿತು ನಾಲ್ಕನೇ ಬಾರಿಗೆ ಶಿಕ್ಷಕರಿಗೆ ಧನಸಹಾಯ ಮಾಡುತ್ತಿದ್ದಾರೆ. ಧನಸಹಾಯದ ಜೊತೆಗೆ ಈ ಬಾರಿ ದಿನಸಿ ಕಿಟ್ ಸಹ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮದ್ದೂರು ಶಾಂತಾ ಮರಿಯಪ್ಪ ಪಬ್ಲಿಕ್ ಶಾಲೆ, ಅವ್ವೇರಹಳ್ಳಿ ಕಾನ್ವೆಂಟ್ನ ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಚೆಕ್ ಮತ್ತು ದಿನಸಿ ಕಿಟ್ವಿತರಿಸಲಾಯಿತು.
ಅಕ್ಕೂರು ಗ್ರಾ.ಪಂ.ಅಧ್ಯಕ್ಷ ಅಶೋಕ, ಸದಸ್ಯೆ ಪ್ರಿಯಾ ಉಮೇಶ್, ಶಾಲೆಯ ಆಡಳಿತ ಮಂಡಳಿಯ ಹರೀಶ್, ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಗೋ.ರಾ. ಶ್ರೀನಿವಾಸ, ಪತ್ರಕರ್ತ ಹರೀಶ್ಇದ್ದರು.