ಮಾಗಡಿ (ರಾಮನಗರ): ‘ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಕುಟುಂಬಕ್ಕೆ ಅವರಿಗೆ ನಾನು ಶಾಸಕನಾಗಿರುವುದು ಹಾಗೂ ಅಧಿಕಾರದಲ್ಲಿ ಇರುವುದನ್ನು ನೋಡಿ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅದರಲ್ಲೂ ನಾನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದನ್ನು ತಡೆದುಕೊಳ್ಳಲಾಗುತ್ತಿಲ್ಲ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಗ್ಯಾರಂಟಿ ಯೋಜನೆ ರದ್ದು ಕುರಿತು ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರುವ ಕುರಿತು ಪಟ್ಟಣದಲ್ಲಿ ಶುಕ್ರವಾರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ದೂರು ಕೊಟ್ಟಿರುವ ಕುರಿತು ಕಾನೂನು ರೀತಿಯಲ್ಲಿ ತನಿಖೆಯಾಗಿ ಸತ್ಯ ಹೊರಗಡೆ ಬರಲಿ. ನಾನು ಹೇಳಿದ್ದು ಜನರಿಗೆ ಅಕ್ಷತೆ ಬೇಕಾ, ಗ್ಯಾರಂಟಿ ಬೇಕಾ ಎಂದು. ಯಾರಿಗಾದರೂ ಬ್ಲಾಕ್ಮೇಲ್ ಮಾಡಿದ್ದೀವಾ?. ಹಿಂದೆ ಕುಮಾರಸ್ವಾಮಿ ಅವರು, ಬಿಜೆಪಿಗೆ ಹೀಗೆ ಮತ ಹಾಕುತ್ತಿದ್ದರೆ, ಮುಂದೊಂದು ದಿನ ಶ್ರೀಲಂಕಾದಂತೆ ಭಾರತವೂ ದಿವಾಳಿಯಾಗುತ್ತದೆ ಎಂದಿದ್ದರು. ಈಗ ಅವರೇ ಬಿಜೆಪಿ ಜೊತೆ ಹೋಗಿದ್ದಾರೆ ಅವರ ಹೇಳಿಕೆಗೆ ಮಹತ್ವ ಕೊಡುವ ಹಾಗೂ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ’ ಎಂದರು.