ಕನಕಪುರ: ‘ವಿಶ್ವ ರೈತ ಚೇತನ ಪ್ರೊ. ಎಂ.ಡಿ ನಂಜುಂಡಸ್ವಾಮಿಯವರು ಅಗಲಿ 19 ವರ್ಷವಾಗಿದೆ. ಆದರೂ ಅವರ ಆದರ್ಶಗಳು ನಮ್ಮನ್ನು ಇಂದಿಗೂ ಮುನ್ನಡೆಸುತ್ತಿವೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚೀಲೂರು ಮುನಿರಾಜು ಹೇಳಿದರು.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹುಣಸನಹಳ್ಳಿ ಗ್ರಾಮದಲ್ಲಿ ರಾಜ್ಯ ರೈತ ಸಂಘದಿಂದ ರೈತರ ಸಂಘದ ಸಂಸ್ಥಾಪಕ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರ 19ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂಜುಂಡಸ್ವಾಮಿಯವರು ರೈತ ಸಂಘ ಸ್ಥಾಪನೆ ಮಾಡಿದ್ದು ಹಾಗೂ ಅವರು ನಡೆದು ಬಂದ ದಾರಿಯ ಬಗ್ಗೆ, ಅವರ ಚಿಂತನೆಗಳ ಬಗ್ಗೆ ತಿಳಿಸಿಕೊಟ್ಟರು.
ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ ಮಾತನಾಡಿ, ‘ರೈತ ಸಂಕುಲವು ಕಷ್ಟದಲ್ಲಿದ್ದಾಗ, ರೈತರ ಸಮಸ್ಯೆಗಳಿಗೆ ಪರಿಹಾರಕ್ಕಾಗಿ ಪ್ರೊ.ನಂಜುಂಡಸ್ವಾಮಿ ಅವರು ರೈತ ಸಂಘವನ್ನು ರಾಜ್ಯದಲ್ಲಿ ಹುಟ್ಟಿಹಾಕಿ ಶಕ್ತಿ ತುಂಬಿ ರಾಜ್ಯವ್ಯಾಪಿ ಸಂಘಟನೆಯನ್ನು ವಿಸ್ತರಿಸಿದರು. ಅದು ಅವರ ಮಾರ್ಗದರ್ಶನದಲ್ಲಿ ಅವರ ಚಿಂತನೆಗಳೊಂದಿಗೆ ಮುನ್ನಡೆಯುತ್ತಿದೆ’ ಎಂದರು.