ಚನ್ನಪಟ್ಟಣ: ಸಾರ್ವಜನಿಕರಲ್ಲಿ ಉದಾಸೀನ ಪ್ರವೃತ್ತಿ ಹೆಚ್ಚುತ್ತಿರುವುದು ಕೊರೊನಾ ಸೋಂಕು ಹರಡುವಿಕೆಗೆ ಪ್ರಮುಖ ಕಾರಣವಾಗಿದೆ ಎಂದು ರಾಂಪುರ ಗ್ರಾಮ ಪಂಚಾಯತಿ ಸದಸ್ಯೆ ವಿಮಲಾ ಯೋಗಾ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಪಾರೇದೊಡ್ಡಿ ಗ್ರಾಮದಲ್ಲಿ ಶಿವ ಪಾರ್ವತಿ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಕೊರೊನಾ ಸೋಂಕು ಕುರಿತು ಜಾಗೃತಿ ಬೀದಿ ನಾಟಕ ಪ್ರದರ್ಶನ ಹಾಗೂ ಉಚಿತ ಮಾಸ್ಕ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೈಹಿಕ ಅಂತರ, ಮಾಸ್ಕ್ ಧರಿಸುವುದು ಹಾಗೂ ಸ್ವಚ್ಛವಾಗಿ ಕೈ ತೊಳೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯ. ಈ ಬಗ್ಗೆ ಸರ್ಕಾರದ ಆದೇಶಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ಶಿಕ್ಷಕ ಹನುಮಯ್ಯ ಮಾತನಾಡಿ, ಜನರು ಜಾಗೃತಿ ವಹಿಸಿದಾಗ ಮಾತ್ರವೇ ಕೊರೊನಾ ಹಿಮ್ಮೆಟ್ಟಿಸಲು ಸಾಧ್ಯ. ಸಮುದಾಯ ಸ್ವಯಂ ತಿಳಿವಳಿಕೆಯಿಂದ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎಂದರು.
ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಏಪ್ರಿಲ್ 1ರಿಂದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟ ವಯಸ್ಸಿನವರು ತಪ್ಪದೇ ಲಸಿಕೆ ಪಡೆಯುವ ಮೂಲಕ ಕೊರೊನಾ ಮಿಯಂತ್ರಣಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಗಾಯಕರಾದ ಚಕ್ಕೆರೆ ಸಿದ್ದರಾಜು, ತುಳಸೀಧರ, ಮುಖಂಡರಾದ ಹನುಮಯ್ಯ, ಲಕ್ಕಮ್ಮ, ಸೋಬಾನೆ ಕಲಾವಿದರಾದ ಪುಟ್ಟಮ್ಮ, ಸಣ್ಣಮ್ಮ, ಸಂಜೀವಮ್ಮ, ತನುಜ ಹಾಜರಿದ್ದರು.