ಮಾಗಡಿ: ಇಲ್ಲಿನ ಕನ್ನಡ ಸ್ವಯಂ ಸೇವಕರ ಸಂಘದಿಂದ ಸೋಮವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 3 ಸಾವಿರ ಅಡಿ ಉದ್ದದ ಕನ್ನಡ ಧ್ವಜದ ಮೆರವಣಿಗೆ ನಡೆಯಿತು.
ಕರುನಾಡನ್ನು ಆಳಿದ ದೊರೆಗಳು ಮತ್ತು ರಾಣಿಯರ ವೇಷಭೂಷಣ ಧರಿಸಿದ್ದ ಸರ್ಕಾರಿ ಪ್ರಥಮ ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣದ ಮುಖ್ಯರಸ್ತೆಯ ಮೂಲಕ ಕೋಟೆಯವರೆಗೆ ಮೆರವಣಿಗೆ ನಡೆಸಿದರು.
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕನ್ನಡ ಸ್ವಯಂ ಸೇವಕರ ಸಂಘದ ಸಂಸ್ಥಾಪಕ ಅಧ್ಯಕ್ಷ ರವಿಕಿರಣ್, ಕನ್ನಡ ನೆಲಜಲದ ಉಳಿವಿಗಾಗಿ ವಿದ್ಯಾರ್ಥಿಗಳು ಪಣತೊಡಬೇಕು. ಐಎಎಸ್, ಐಪಿಎಸ್, ಎಂಬಿಬಿಎಸ್, ಎಂಜಿನಿಯರಿಂಗ್, ರೈಲ್ವೆ, ಅಂಚೆ, ಬ್ಯಾಂಕಿಂಗ್ ಪರೀಕ್ಷೆಗಳು, ನೀಟ್, ಸಿಇಟಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ವೃತ್ತದಲ್ಲಿ ಚಾಲುಕ್ಯ ವಂಶದ ದೊರೆ ಇಮ್ಮಡಿ ಪುಲಕೇಶಿ ಪುತ್ಥಳಿಯನ್ನು ಸ್ಥಾಪಿಸಲಾಗುವುದು. ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಮಾತ್ರ ರಾಜ್ಯದಲ್ಲಿ ಉದ್ಯೋಗ ನೀಡಬೇಕು. ನಮ್ಮ ರಾಜ್ಯದಲ್ಲಿಯೇ ವಿದ್ಯಾಭ್ಯಾಸ ಮಾಡಿದವರಿಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಶೇ 60ರಷ್ಟು ಉದ್ಯೋಗವಕಾಶ ಒದಗಿಸಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಣ್ಣ ಮಾತನಾಡಿ, ಮಾಗಡಿಯಲ್ಲಿ ಮೂರು ಸಾವಿರ ಅಡಿಗಳ ಕನ್ನಡದ ಬಾವುಟ ಹಿಡಿದು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ, ಕನ್ನಡತನ ಮೆರೆದು, ಇತಿಹಾಸ ನಿರ್ಮಿಸಿದ್ದಾರೆ. ನಾಡಿನ ಮೂಲನಿವಾಸಿಗಳಾದ ಇರುಳಿಗ, ಸೋಲಿಗ, ಕಾಡುಗೊಲ್ಲ, ಮೇದ, ಶಿಳ್ಳೇಕ್ಯಾತ, ದೊಂಬಿದಾಸ, ದೊಂಬರು, ಕೊರಮ, ಕೊರಚ ಇತರೆ ಬಡುಕಟ್ಟು ಸಮುದಾಯಗಳಿವೆ. ಬುಡಕಟ್ಟು ಸಮುದಾಯದವರು ಇಂದಿಗೂ ತಮ್ಮ ಆಧೀಮ, ವನವಾಸಿ ಜೀವನದ ಕುರುಹುಗಳನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಕನ್ನಡ ಪರ ಹೋರಾಟಗಾರ ಗುರುದೇವ್ ನಾರಾಯಣ ಕುಮಾರ್, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಡಾ.ರಮೇಶ್, ಪ್ರಾಧ್ಯಾಪಕಿ ಡಾ.ಭವಾನಿ, ಗೋಪಾಲ್ ಕೃಷ್ಣ, ಜ್ಞಾನಮಧು, ಸೋಮಶೇಖರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.