ಚನ್ನಪಟ್ಟಣ: ‘ದಕ್ಷಿಣ ರಾಜ್ಯಗಳ ಪಾಲು ಕೇಳಿದ ನನ್ನನ್ನು ಗುಂಡಿಕ್ಕಿ ಕೊಲ್ಲಬೇಕು ಎಂದವರು ತಮ್ಮ ಪುತ್ರನಿಗೆ ಟಿಕೆಟ್ ಸಿಗದೆ ಹತಾಶರಾಗಿ ಬಂಡಾಯದ ಮಾತನ್ನಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ಹೋದವರ ಕತೆ ಏನಾಗುತ್ತದೊ ಗೊತ್ತಿಲ್ಲ’ ಎಂದು ಸಂಸದ ಡಿ.ಕೆ. ಸುರೇಶ್ ಲೇವಡಿ ಮಾಡಿದ್ದಾರೆ.
ಬುಧವಾರ ಬಿಡುಗಡೆಯಾದ ಬಿಜೆಪಿ ಎರಡನೇ ಪಟ್ಟಿ ಕುರಿತು ಪ್ರತಿಕ್ರಿಯಿಸಿದ ಅವರು, ಮೈಸೂರು ಹಾಲಿ ಸಂಸದ ಪ್ರತಾಪ ಸಿಂಹ, ದಕ್ಷಿಣ ಕನ್ನಡದ ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಬಿಜೆಪಿ ನಾಯಕರು ಕೈಕೊಟ್ಟಿದ್ದಾರೆ ಎಂದರು.
ತಾಲ್ಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇವೇಗೌಡರ ಕುಟುಂಬದ ವಿರುದ್ಧ ಸ್ಪರ್ಧಿಸುವುದು ನನಗೆ ಹಾಗೂ ನನ್ನ ಅಣ್ಣ ಡಿ.ಕೆ. ಶಿವಕುಮಾರ್ ಅವರಿಗೆ ಹೊಸತಲ್ಲ’ ಎಂದರು.
‘ಜೆಡಿಎಸ್ ಮತ್ತು ಆ ಪಕ್ಷದ ನಾಯಕತ್ವದ ಬಗ್ಗೆ ಸ್ವತಃ ಎಚ್.ಡಿ. ದೇವೇಗೌಡ ಅವರ ಅಳಿಯ ಡಾ. ಮಂಜುನಾಥ್ ಅವರಿಗೆ ವಿಶ್ವಾಸ ಇಲ್ಲ. ಹಾಗಾಗಿಯೇ, ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ’ ಎಂದರು.
‘ಜೆಡಿಎಸ್ ಮತ್ತು ಗೌಡರ ಜನಪ್ರಿಯತೆ ಕುಸಿದಿದೆ ಎಂದು ಗೊತ್ತಾಗಿ ಬಿಜೆಪಿ ಆಯ್ಕೆ ಮಾಡಿಕೊಂಡ ಡಾ.ಮಂಜುನಾಥ್ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ’ ಎಂದು ಸುರೇಶ್ ವ್ಯಂಗ್ಯವಾಡಿದರು.
‘ಹಾಗಾಗಿ ಜೆಡಿಎಸ್ ಕಾರ್ಯಕರ್ತರು ಇನ್ನಾದರೂ ಯೋಚನೆ ಮಾಡಬೇಕು. ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಿಮ್ಮ ಪರವಾಗಿ ನಾನಿರುವೆ. ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ’ ಎಂದು ಆಹ್ವಾನ ನೀಡಿದರು.