ರಾಮನಗರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜಿಲ್ಲೆಯ ವಿವಿಧೆಡೆ ಇಂತಹ ಒಟ್ಟು 23 ವಸತಿ ಶಾಲೆಗಳು ಇದ್ದು, ಆರರಿಂದ ಹತ್ತನೇ ತರಗತಿವರೆಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಬಡ ಕುಟುಂಬಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಈ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದಾರೆ.
ಜಿಲ್ಲೆಯ ಶಾಲೆಗಳಲ್ಲಿ ಈ ವರ್ಷ 1200ಕ್ಕೂ ಹೆಚ್ಚು ಸೀಟು ಲಭ್ಯವಿದ್ದು, ಇವುಗಳ ಪ್ರವೇಶಕ್ಕೆ ಪರೀಕ್ಷೆ ನಡೆದಿತ್ತು. ಅದನ್ನು ಆಧರಿಸಿ ಜೂನ್ 20–21ರಂದು ಮೊದಲ ಹಂತದ ಕೌನ್ಸೆಲಿಂಗ್ ನಡೆದಿದ್ದು, ಅಲ್ಲಿ ಸುಮಾರು 700 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರು.
ನಗರದ ಕೆಂಪೇಗೌಡ ವೃತ್ತದಲ್ಲಿ ಇರುವ ಮೊರಾರ್ಜಿ ವಸತಿ ಶಾಲೆಯ ಆವರಣದಲ್ಲಿ ಸೋಮವಾರ ನಡೆದ ಎರಡನೇ ಹಂತದ ಕೌನ್ಸೆಲಿಂಗ್ಗೆ 350–400 ವಿದ್ಯಾರ್ಥಿಗಳು ಮತ್ತು ಪೋಷಕರು ಬಂದಿದ್ದರು. ಇಲಾಖೆಯ ಸಿಬ್ಬಂದಿ ವಿಚಾರಣೆಯ ಮೂಲಕ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಿದರು.
ಬೆಳಿಗ್ಗೆ 10.30ಕ್ಕೆ ಕೌನ್ಸೆಲಿಂಗ್ ಆರಂಭಗೊಂಡಿದ್ದು, ಸಂಜೆ 6ರವರೆಗೂ ನಡೆಯಿತು. ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್, ವಸತಿ ಶಾಲೆಗಳ ಪ್ರಾಚಾರ್ಯರಾದ ಮಹೇಶ್, ಕುಮಾರ್, ಪವಿತ್ರಾ, ಹನುಮೇಗೌಡ, ಹನುಮಂತು ಮೊದಲಾದವರು ಈ ಕಾರ್ಯ ನಡೆಸಿಕೊಟ್ಟರು.
‘ಕಳೆದ ಕೆಲವು ವರ್ಷಗಳಿಂದ ಈ ಶಾಲೆಗಳಿಗೆ ಪ್ರವೇಶ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರವಾಗಿದೆ’ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ತಿಳಿಸಿದರು.
** ಈ ವರ್ಷ ಜಿಲ್ಲೆಯ ಮೊರಾರ್ಜಿ ಶಾಲೆಗಳ ಬಹುತೇಕ ಸೀಟುಗಳು ಭರ್ತಿಯಾಗುವ ನಿರೀಕ್ಷೆ ಇದೆ. ಉಳಿದ ಸೀಟುಗಳಿಗೆ ಶೀಘ್ರ ಮೂರನೇ ಹಂತದ ಕೌನ್ಸೆಲಿಂಗ್ ನಡೆಯಲಿದೆ ಸತೀಶ್,ಸಹಾಯಕ ನಿರ್ದೇಶಕ, ಸಮಾಜ ಕಲ್ಯಾಣ ಇಲಾಖೆ