ಕನಕಪುರ: ಇಲ್ಲಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಅವರ ಪುತ್ರ ಆಕಾಶ್, ತಾತ ಕೆಂಪೇಗೌಡ ಅವರ ಸಮಾಧಿಗೆ ತಂದೆಯ ಪರವಾಗಿ ಸೋಮವಾರ ಪೂಜೆ ಸಲ್ಲಿಸಿದರು.
ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರ ತಂದೆ ದೊಡ್ಡಾಲಹಳ್ಳಿ ಕೆಂಪೇಗೌಡರ ಸಮಾಧಿಗೆ ಗೌರಿ ಹಬ್ಬದಂದು ಪೂಜೆ ಸಲ್ಲಿಸಿ, ಎಡೆ ಇಡುವುದು ಕುಟುಂಬದ ಸಂಪ್ರದಾಯ. ಅದರಂತೆ ಶಿವಕುಮಾರ್ ಮತ್ತು ಸಹೋದರ ಸುರೇಶ್ ಎಡೆ ಇಡುವ ಮತ್ತು ಪೂಜೆ ನೆರವೇರಿಸುವ ಕಾರ್ಯ ಮಾಡಬೇಕಿತ್ತು.
ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ವಿಚಾರಣೆಗೆ ಒಳಪಟ್ಟಿರುವ ಶಿವಕುಮಾರ್ ಅವರು ತಂದೆ ಸೇರಿದಂತೆ ಹಿರಿಯರ ಪೂಜೆ ಕಾರ್ಯದಲ್ಲಿ ಪಾಲ್ಗೊಳ್ಳಲು ಸೋಮವಾರ ಒಂದು ದಿನದ ಮಟ್ಟಿಗೆ ಅವಕಾಶ ಕೋರಿದ್ದರು. ಅಧಿಕಾರಿಗಳು ಅನುಮತಿ ನಿರಾಕರಿಸಿ ಸೋಮವಾರವೂ ವಿಚಾರಣೆ ನಡೆಸಿದ್ದರಿಂದ ಅವರು ಬಂದಿರಲಿಲ್ಲ.
ಅವರ ಪರವಾಗಿ ಆಕಾಶ್ ಪೂಜೆ ನೆರವೇರಿಸಿದರು. ಶಿವಕುಮಾರ್ ತಾಯಿ ಗೌರಮ್ಮ, ಪತ್ನಿ ಉಷಾ, ಮಗಳು ಐಶ್ವರ್ಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.