ಕನಕಪುರ: ತಾಲ್ಲೂಕಿನಾದ್ಯಂತ ರೈತರ ಜಮೀನುಗಳಿಗೆ ನೀರು ಹಾಯಿಸಲು ಹಗಲು ಹೊತ್ತಿನಲ್ಲಿ ಏಳು ತಾಸು ತ್ರೀಫೇಸ್ ವಿದ್ಯುತ್ ನೀಡಬೇಕು ಎಂದು ರೈತ ಸಂಘ ಹಾಗೂ ರೇಷ್ಮೆ ಉತ್ಪಾದಕ ಕಂಪನಿ ನೇತೃತ್ವದಲ್ಲಿ ಇಲ್ಲಿನ ಬೆಸ್ಕಾಂ ಇಲಾಖೆಯ ಇಇ ಕಚೇರಿಯಲ್ಲಿ ಗುರುವಾರ ಮನವಿ ಸಲ್ಲಿಸಲಾಯಿತು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೀಲೂರು ಮುನಿರಾಜು ಮಾತನಾಡಿ, ‘ರಾತ್ರಿ ವೇಳೆ ರೈತರ ಕೃಷಿ ಪಂಪ್ಸೆಟ್ಗಳಿಗೆ ತ್ರೀಫೇಸ್ ಕರೆಂಟ್ ಕೊಟ್ಟರೆ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದೊ ಅಥವಾ ಜಮೀನಿನಲ್ಲಿ ನೀರು ಕಟ್ಟುವುದೋ ನೀವೇ ಹೇಳಿ’ ಎಂದು ಪ್ರಶ್ನಿಸಿದರು.
ಕನಕಪುರ ತಾಲ್ಲೂಕಿನ ಗ್ರಾಮಗಳು ಕಾಡಂಚಿನಿಂದ ಕೂಡಿವೆ. ಹಗಲು ಹೊತ್ತಿನಲ್ಲೇ ಚಿರತೆ, ಕಾಡಾನೆಗಳು ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಇಂಥದರಲ್ಲಿ ರಾತ್ರಿ ಹೊತ್ತು ಜಮೀನುಗಳಿಗೆ ನೀರು ಹಾಯಿಸಲು ಹೊಲಕ್ಕೆ ಹೋಗುವುದಾದರೂ ಹೇಗೆ. ಸರ್ಕಾರಕ್ಕೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿಯಿದ್ದರೆ, ಹಗಲು ಹೊತ್ತಲ್ಲಿ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕಿನ ಬಹುತೇಕ ರೇಷ್ಮೆ ಬೆಳೆಗಾರರು ಕೃಷಿ ಪಂಪ್ಸೆಟ್ ಅವಲಂಭಿಸಿಯೇ ರೇಷ್ಮೆ ಕೃಷಿ ಮಾಡುತ್ತಾರೆ. ಹೀಗಾಗಿ ಎಲ್ಲರೂ ರೇಷ್ಮೆ ತೋಟಕ್ಕೆ ನೀರು ಕಟ್ಟುತ್ತಾರೆ. ನೀವು ರಾತ್ರಿ ವೇಳೆ ತ್ರೀಫೇಸ್ ವಿದ್ಯುತ್ ನೀಡಿದರೆ ಹೇಗೆ ಎಂದರು.
ರೈತರ ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬೆಸ್ಕಾಂ ಇಇ ನಾಗರಾಜ್, ಹಗಲಿನಲ್ಲಿಯೇ ರೈತರಿಗೆ ಏಳು ತಾಸು ತ್ರೀಫೇಸ್ ವಿದ್ಯುತ್ ಕೊಡಲು ಪ್ರಯತ್ನಿಸಲಾಗುವುದು ಎಂದರು.
ರೈತ ಸಂಘ ಮತ್ತು ರೇಷ್ಮೆ ರೈತ ಉತ್ಪಾದಕ ಕಂಪನಿಯ ಕರಿಯಪ್ಪ, ಶಿವರಾಜು, ಚಾಮ, ಸತೀಶ್, ವೆಂಕಟೇಶ್, ಮುಕ್ತರ್, ಮುನೇಶ್, ಮುನಿಮಾದು, ಶಿವಕುಮಾರ್, ಬೋಜೆಗೌಡ, ಸಾಗರ್ ಇದ್ದರು.