ಚನ್ನಪಟ್ಟಣ (ರಾಮನಗರ): ತಾಲ್ಲೂಕಿನ ಹೊಂಗನೂರು ಗ್ರಾಮದ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಆರು ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಳಿಗ್ಗೆ ಕೆರೆಯಲ್ಲಿ ನೀರು ಕುಡಿಯಲು ಆಗಮಿಸಿದ್ದ ಆನೆಗಳ ಹಿಂಡನ್ನು ಗಮನಿಸಿದ ಸ್ಥಳೀಯರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು.
ಕಾಡಾನೆಗಳ ಹಿಂಡು ಕೆರೆಯಲ್ಲಿ ಇರುವ ವಿಷಯ ತಿಳಿದು ಹೊಂಗನೂರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳದಲ್ಲಿ ಜಮಾಯಿಸಿದ್ದರು. ನಂತರ ಆನೆಗಳು ಕೆರೆಯಲ್ಲಿದ್ದ ಪೊದೆಗಳ ಮರೆಯಲ್ಲಿ ಅಡಗಿಕೊಂಡವು.
ಬಿ.ವಿ. ಹಳ್ಳಿ ಅರಣ್ಯಪ್ರದೇಶದ ಕಡೆಯಿಂದ ಕಾಡಾನೆಗಳು ಆಗಮಿಸಿದ್ದು, ಈ ಭಾಗದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಸಂಜೆಯ ಹೊತ್ತಿಗೆ ಹೊಂಗನೂರು ಕೆರೆಯ ಬಳಿಯಿಂದ ಆನೆಗಳ ಹಿಂಡು ಪಕ್ಕದ ಬೆಟ್ಟದ ಕಡೆಗೆ ಪ್ರಯಾಣ ಬೆಳೆಸಿದವು. ರಾತ್ರಿಯ ವೇಳೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಅಟ್ಟಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.