ಮಾಗಡಿ: ತಾಲ್ಲೂಕಿನ ಚಾರಿತ್ರಿಕ ಕಲ್ಯಾ ಬೆಟ್ಟದ ತಪ್ಪಲಿನಲ್ಲಿ ಅಪರಿಚಿತರು ಸಿಡಿಮದ್ದು ಸಿಡಿಸಿ, ಶಿಂಷಾನದಿಯ ಹಳ್ಳಕ್ಕೆ ಕಲ್ಲುಗಳನ್ನು ತುಂಬಿರುವ ಘಟನೆ ಗುರುವಾರ ನಡೆದಿದೆ.
ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಸುರೇಂದ್ರ ಮೂರ್ತಿ ಮತ್ತು ಕಂದಾಯ ಅಧಿಕಾರಿಗಳಾದ ನಟರಾಜ, ಮಧು ಅವರು ಮತ್ತಷ್ಟು ಸಿಡಿಮದ್ದು ಸಿಡಿಸುವುದಕ್ಕೆ ತಡೆಯೊಡ್ಡಿದ್ದಾರೆ. ಸಂಬಂಧಿಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸುರೇಂದ್ರ ಮೂರ್ತಿ ತಿಳಿಸಿದ್ದಾರೆ.
ಕಲ್ಯಾ ಬೆಟ್ಟದಲ್ಲಿ ಕಲಿಗಣನಾಥ ಗುಹಾಂತರ ದೇವಾಲಯವಿದೆ. ಅಲ್ಲದೇ, 18 ಶಿಲಾಶಾಸನಗಳೂ ಇವೆ. ಗುಹೆಯ ಹೊರಭಾಗದಲ್ಲಿ ಬಹುಭಾಷಾ ವಿಶಾರದ ಕವಿ ಪಾಲ್ಕುರಿಕೆ ಸೋಮನಾಥನ ಸಮಾಧಿ ಇದೆ. ಜೈನ ಯತಿಗಳು ನೆಲೆಸಿದ್ದ ಗುಹೆಗಳಿವೆ. ಶರಣೆ ಸರ್ವಶೀಲೆ ಚನ್ನಮ್ಮ ಅವರ ಗದ್ದುಗೆ ಇದೆ. ಬೆಟ್ಟದ ತಪ್ಪಲಿನಲ್ಲಿ ಜೈನರ ಮಾನಸ್ತಂಭವಿದೆ.