ರಾಮನಗರ: ಆಷಾಢದ ಕೊನೆಯ ಅಮಾವಾಸ್ಯೆಯಾದ ಭೀಮನ ಅಮಾವಾಸ್ಯೆ ಪ್ರಯುಕ್ತ ಜಿಲ್ಲೆಯ ದೇಗುಲಗಳಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿತು.
ಕನಕಪುರದ ಕಬ್ಬಾಳಮ್ಮ, ರಾಮನಗರದ ಚಾಮುಂಡೇಶ್ವರಿ, ಬನ್ನಿಮಹಾಕಾಳಿ, ಹಾರೋಹಳ್ಳಿಯ ಚಾಮುಂಡೇಶ್ವರಿ ಮೊದಲಾದ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಶಕ್ತಿ ದೇವತೆಗಳ ದೇಗುಲಗಳನ್ನು ಹೂವುಗಳಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಬೆಳಿಗ್ಗೆಯಿಂದಲೇ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಅದರಲ್ಲೂ ನವದಂಪತಿ ಸಂಖ್ಯೆ ಹೆಚ್ಚಿತ್ತು. ಕೋವಿಡ್ ಹಿನ್ನೆಲೆಯಲ್ಲಿ ದೇಗುಲಗಳಲ್ಲಿ ಕೇವಲ ಪೂಜೆ ಹಾಗೂ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಮಹಿಳೆಯರು ದೇಗುಲಗಳಿಗೆ ತೆರಳಿ ಆರತಿ ಬೆಳಗಿದರು. ಮನೆಗಳಲ್ಲೂ ಭೀಮನ ಅಮಾವಾಸ್ಯೆ ನಿಮಿತ್ತ ಪೂಜೆ ನಡೆಯಿತು. ಪತಿ, ಪತ್ನಿಯರು ಒಬ್ಬರಿಗೊಬ್ಬರು ಕಂಕಣ ಕಟ್ಟಿಕೊಂಡರು.
ಇದರೊಟ್ಟಿಗೆ ಶ್ರಾವಣ ಮಾಸದ ಆರಂಭದ ಹಿನ್ನೆಲೆಯಲ್ಲಿ ಅದಕ್ಕಾಗಿ ದೇಗುಲಗಳಲ್ಲಿ ಸಿದ್ಧತೆ ನಡೆದಿದ್ದವು.