ಸಿಂಧನೂರು: ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಪತಿಯು ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ ನಡೆದಿದೆ.
ರಾಯಚೂರು ತಾಲ್ಲೂಕಿನ ಯಲಮಂಚಾಲಿ ಗ್ರಾಮದ ಸವಿತಾ (20) ಎಂಬ ಯುವತಿಯನ್ನು ದಿದ್ದಿಗಿ ಗ್ರಾಮದ ಭೀಮಪ್ಪ (22) ಆರು ತಿಂಗಳ ಹಿಂದೆ ಮದುವೆ ಆಗಿದ್ದ.
ಮದುವೆ ನಂತರ ಸಣ್ಣಪುಟ್ಟ ವಿಷಯಕ್ಕೆ ಪತ್ನಿಯ ಮೇಲೆ ಸಂಶಯ ಪಡುತ್ತಿದ್ದ. ಇದೇ ಕಾರಣಕ್ಕೆ ಆಗಾಗ್ಗೆ ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು. ವಾರದ ಹಿಂದೆ ಜಗಳವಾದದ್ದರಿಂದ ಪತ್ನಿ ಸವಿತಾ ತವರೂರಿಗೆ ತೆರಳಿದ್ದಳು. ಗುರುವಾರ ಆಕೆಯನ್ನು ಪತಿ ಭೀಮಪ್ಪ ದಿದ್ದಿಗಿ ಗ್ರಾಮಕ್ಕೆ ಕರೆದುಕೊಂಡು ಬರುವಾಗ ಪುನಃ ಜಗಳವಾಡಿದ್ದಾನೆ. ಇದು ವಿಕೋಪಕ್ಕೆ ಹೋಗಿ ಊರ ಸಮೀಪದ ಹೊಲದಲ್ಲಿ ಪತ್ನಿಯ ಮುಖ ಮತ್ತು ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ 100 ಮೀಟರ್ ಅಂತರದಲ್ಲಿರುವ ಬನ್ನಿ ಗಿಡಕ್ಕೆ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಸವಿತಾಳ ತಾಯಿ ಮಲ್ಲಮ್ಮ ನೀಡಿದ ದೂರಿನ ಮೇಲೆ ಶುಕ್ರವಾರ ಬಳಗಾನೂರು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ಕಲ್ ಸಬ್ಇನ್ಸ್ಪೆಕ್ಟರ್ ಸುನೀಲ್ಕುಮಾರ ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಎಚ್, ಡಿವೈಎಸ್ಪಿ ಬಿ.ಎಸ್.ತಳವಾರ ಭೇಟಿ ನೀಡಿ ಪರಿಶೀಲಿಲನೆ ನಡೆಸಿದರು.
ನಂತರ ಪತಿ-ಪತ್ನಿ ಮೃತದೇಹವನ್ನು ಸಿಂಧನೂರಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.