ಹಾರೋಹಳ್ಳಿ (ರಾಮನಗರ): ‘ಬಹಳ ದಿನಗಳಿಂದ ಕೃಷಿ ಮಾಡುತ್ತಿದ್ದ ಜಮೀನನ್ನು ತೆರವುಗೊಳಿಸಿ ಅರಣ್ಯ ಇಲಾಖೆ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಅರಣ್ಯ ಇಲಾಖೆಯಿಂದ ನಮ್ಮ ಜಮೀನು ವಾಪಸ್ ಕೊಡಿಸಿ’ ಎಂದು ದಲಿತ ಮಹಿಳೆಯರು ಸಂಸದ ಡಿ.ಕೆ. ಸುರೇಶ್ ಅವರ ಕಾಲಿಗೆ ಬಿದ್ದು ಅಂಗಲಾಚಿದರು.
ಹಾರೋಹಳ್ಳಿಯ ಕೆಪಿಎಸ್ ಶಾಲೆ ಆವರಣದಲ್ಲಿ ಭಾನುವಾರ ನಡೆದ ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಮರಳವಾಡಿ ಹೋಬಳಿಯ ಸಿಡಿ ದೇವರಹಳ್ಳಿ ಗ್ರಾಮದ ರೈತ ಮಹಿಳೆಯರು ‘ಹೆಣ ಹೊಳಲು ಜಾಗವಿಲ್ಲ ಜಮೀನು ಬಿಡಿಸಿಕೊಡಿ’ ಎಂದು ಮನವಿ ಮಾಡಿದರು.
'ಏ ಸುಮ್ನಿರಿ...ನೀವೆಲ್ಲ ಜಮೀನು ಮಾರಾಟ ಮಾಡಿಕೊಂಡಿರುವುದು ನನಗೆ ಗೊತ್ತಿದೆ' ಎಂದು ಡಿ.ಕೆ. ಸುರೇಶ್ ಅವರು ಮಹಿಳೆಯರನ್ನು ಗದರಿಸಿದರು.
‘ದೇವರಹಳ್ಳಿಯಲ್ಲಿ ದಲಿತರು 30-40 ವರ್ಷದಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದ ಜಮೀನನ್ನು (ಸರ್ವೇ ಸಂಖ್ಯೆ104) ಏಕಾಏಕಿ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಕಂದಕ ತೋಡಿದ್ದಾರೆ. 94 ಜನರ ಹೆಸರಿನಲ್ಲಿ ಖಾತೆಯಿದ್ದು, ಕಂದಾಯ ಕೂಡ ಕಟ್ಟಲಾಗಿದೆ. ನೀವೆ ನ್ಯಾಯ ಕೊಡಿಸಿ’ ಎಂದು ಮಹಿಳೆಯರು ಮನವಿ ಮಾಡಿದರು.