ಅರವಟಿಗೆಗಳಲ್ಲಿ ಉಚಿತವಾಗಿ ಪುಷ್ಕಳ ಭೋಜನ ನೀಡಲು ಸಕಲ ಸಿದ್ಧತೆ ನಡೆದಿದೆ. ತೇರಿನ ದಿನ ಬರುವ ಭಕ್ತರಿಗಾಗಿ ಅವರೆಕಾಳಿನ ಜೊತೆಗೆ ಹಲಸಿನ ಕೊತ್ತುಕಾಯಿ ಸಾರು, ಬಿಸಿಬಿಸಿ ರಾಗಿಮುದ್ದೆ, ತುಪ್ಪ, ಸಿಹಿಬೂಂದಿ, ಅನ್ನಸಾಂಬಾರು, ಮಜ್ಜಿಗೆಹುಳಿ ಹೊಟ್ಟೆ ತುಂಬುವಷ್ಟು ಬಡಿಸಲಾಗುವುದು.
ರಥಕ್ಕೆ ಪೂಜೆ ಸಲ್ಲಿಸಿದ ಕೂಡಲೇ ಹಣ್ಣಿನ ರಸಾಯನ, ಕೋಸುಂಬರಿ, ಬೇಲದ ಹಣ್ಣಿನ ಪಾನಕ, ಮಜ್ಜಿಗೆ ನೀಡಲಾಗುವುದು.
ತಿರುಪತಿ ತಿಮ್ಮಪ್ಪನನ್ನು ಚಿನ್ನದರಂಗ ಎಂದರೆ, ಮಾಗಡಿ ತಿರುವೆಂಗಳನಾಥ ರಂಗನಾಥಸ್ವಾಮಿಯನ್ನು ಅನ್ನದ ರಂಗ ಎಂದೇ ಕರೆಯುವ ಪ್ರತೀತಿ ಇದೆ ಎಂದು ತಾಲ್ಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎಂ.ಜಿ.ಗೋಪಾಲ್ ತಿಳಿಸಿದರು.
ಒಕ್ಕಲಿಗರ ಅರವಟ್ಟಿಗೆಗೆ ವಿಜಯನಗರ ಆದಿಚುಂಚನಗಿರಿ ಮಠದ ಸೌಮ್ಯನಾಥಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತಸ್ವಾಮಿ, ಕುಮಾರ ಚಂದ್ರಶೇಖರಸ್ವಾಮಿ ಭಾಗವಹಿಸಲಿದ್ದಾರೆ.